ಬೆಂಗಳೂರು: ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಲಿಮಿಟೆಡ್ ( ಈ ಹಿಂದೆ ಮೈಸೂರು ಮಿನರಲ್ಸ್ ಸಂಸ್ಥೆ) ಗಣಿಗಾರಿಕೆಯಲ್ಲಿ ತೊಡಗಿರುವ ಕರ್ನಾಟಕ ಸರ್ಕಾರದ ಸಂಪೂರ್ಣ ಮಾಲೀಕತ್ವದ ಒಂದು ಉನ್ನತ ಸಾರ್ವಜನಿಕ ಉದ್ದಿಮೆಯಾಗಿದ್ದು, ಸಂಸ್ಥೆಯು 2023-24ನೇ ಸಾಲಿನಲ್ಲಿ ರೂ.1403.58 ಕೋಟಿಗಳ ವಹಿವಾಟು ನಡೆಸಿ ರೂ.867.33 ಕೋಟಿ ತೆರಿಗೆ ಪೂರ್ವ ಲಾಭ ಹಾಗೂ ರೂ.643.20 ಕೋಟಿ ತೆರಿಗೆ ನಂತರದ ಲಾಭ ಗಳಿಸಿರುತ್ತದೆ.
ದಿನಾಂಕ 05.03.2025 ರಂದು ನಡೆದ 354ನೇ ಮಂಡಳಿ ಸಭೆಯಲ್ಲಿ ಕಂಪನಿಯು 2023-24ನೇ ಸಾಲಿನಲ್ಲಿ ಗಳಿಸಿರುವ ನಿವ್ವಳ ಲಾಭದ (Net profit) ಮೇಲೆ ಷೇರುದಾರರಿಗೆ ಅಂದರೆ ಸರ್ಕಾರಕ್ಕೆ ರೂ.191.43 ಕೋಟಿಗಳನ್ನು ಶೇಕಡಾ 30% ಲಾಭಾಂಶವಾಗಿ ನೀಡಲು ಮಂಡಳಿ ನಿರ್ದೇಶಕರು ಒಪ್ಪಿಗೆ ನೀಡಿದ್ದು, ದಿನಾಂಕ 05.03.2025 ರಂದು ನಡೆದ 58ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅನುಮೋದನೆಗೊಂಡಿರುತ್ತದೆ.
ಆರ್ಥಿಕ ಇಲಾಖೆಯ ದಿನಾಂಕ 15.07.2024ರ ಆದೇಶ ಸಂಖ್ಯೆ.ಆಇ 51 ಐಎನ್ವಿ 2024 ರನ್ವಯ ಶೇಕಡಾ 30% ವಿಶೇಷ ಲಾಭಾಂಶ ರೂ.1195.63 ಕೋಟಿಗಳನ್ನು ದಿನಾಂಕ 31.03.2024ರ ಬ್ಯಾಲೆನ್ಸ್ ಶೀಟ್ ಪ್ರಕಾರ ನಗದು ಮತ್ತು ನಗದು ಸಮಾನದ ಮೊತ್ತದ ಮೇಲೆ ವಿಶೇಷ ಲಾಭಾಂಶವಾಗಿ ನೀಡಲು ಮಂಡಳಿ ನಿರ್ದೇಶಕರು ಒಪ್ಪಿಗೆ ನೀಡಿದ್ದು, ದಿನಾಂಕ 05.03.2025 ರಂದು ನಡೆದ 58ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅನುಮೋದನೆಗೊಂಡಿರುತ್ತದೆ.
ಪ್ರತಿ ವರ್ಷ ಈ ನಿಗಮದಿಂದ ರೂ.15.00 ಕೋಟಿಗಳನ್ನು ಮಾನ್ಯ ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ಆಯವ್ಯಯದಲ್ಲಿ ನಿಗದಿಪಡಿಸಲಾಗುತ್ತಿದ್ದು, 2023-24ನೇ ಸಾಲಿಗೆ ರೂ.15.00 ಕೋಟಿಗಳನ್ನು ನಿಗದಿಪಡಿಸಿದ್ದು, ರೂ.15.00 ಕೋಟಿಗಳನ್ನು ಈ ದಿನ ಮಾನ್ಯ ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ಅರ್ಪಿಸುತ್ತಿದ್ದೇವೆ.
ದಿನಾಂಕ 14.03.2025 ರಂದು ಶ್ರೀಯುತ ಎಸ್.ಎಸ್. ಮಲ್ಲಿಕಾರ್ಜುನ, ಸನ್ಮಾನ್ಯ ಸಚಿವರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ಶ್ರೀ.ಜಿ.ಎಸ್.ಪಾಟೀಲ್, ಮಾನ್ಯ ಅಧ್ಯಕ್ಷರು, ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಲಿಮಿಟೆಡ್ ರವರು 2023-24ನೇ ಸಾಲಿಗೆ ಸನ್ಮಾನ್ಯ ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ರೂ.15.00 ಕೋಟಿಗಳ ಧನಾದೇಶವನ್ನು, ರೂ.191.43 ಕೋಟಿಗಳ ಲಾಭಾಂಶದ ಧನಾದೇಶವನ್ನು ಹಾಗೂ ರೂ.1195.63 ಕೋಟಿಗಳ ವಿಶೇಷ ಲಾಭಾಂಶವನ್ನು ಈ ದಿನ ಸನ್ಮಾನ್ಯ ಮುಖ್ಯ ಮಂತ್ರಿಗಳಿಗೆ ಅರ್ಪಿಸಿದರು. ಶ್ರೀ ರಮಣ್ ದೀಪ್ ಚೌಧರಿ, ಭಾ.ಆ.ಸೇ, ಸರ್ಕಾರದ ಕಾರ್ಯದರ್ಶಿಗಳು, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಹಾಗೂ ಶ್ರೀ. ಮಹಾಂತೇಶ್ ಬಿಳಗಿ, ಭಾ.ಆ.ಸೇ, ವ್ಯವಸ್ಥಾಪಕ ನಿರ್ದೇಶಕರು, ಕೆ.ಎಸ್.ಎಮ್.ಸಿ.ಎಲ್ ರವರು ಹಾಗೂ ನಿಗಮದ ಅಧಿಕಾರಿಗಳು ಹಾಜರಿದ್ದರು.
Publisher: ಕನ್ನಡ ನಾಡು | Kannada Naadu