
ಶಿರಸಿ: ಕರ್ನಾಟಕ ಯಕ್ಷಗಾನ ಅಕಾಡೆಮಿ ನೀಡುವ ೨೦೨೪ನೇ ಸಾಲಿನ ಪುಸ್ತಕ ಬಹುಮಾನ ಈ ಬಾರಿ ಹಿರಿಯ ಪತ್ರಕರ್ತ ಅಶೋಕ ಹಾಸ್ಯಗಾರರ ದಶರೂಪಕಗಳ ದಶಾವತಾರ ಕೃತಿಗೆ ಲಭಿಸಿದೆ.
ಉಡುಪಿಯ ಕಾಂತಾವರ ಕನ್ನಡ ಸಂಘವು ಕೊಡಮಾಡುವ ಪ್ರತಿಷ್ಠಿತ ದತ್ತಿ ನಿಧಿ ಪ್ರಶಸ್ತಿ ಬೆನ್ನಲ್ಲೆ ಯಕ್ಷಗಾನ ಸಂಶೋಧನಾ ಗ್ರಂಥ ‘ದಶರೂಪಕಗಳ ದಶಾವತಾರ’ಕ್ಕೆ ಅಕಾಡೆಮಿ ಪುಸ್ತಕ ಗೌರವ ಲಭಿಸಿದೆ.
ನಿವೃತ್ತ ಪತ್ರಿಕಾ ಸಂಪಾದಕ, ಕವಿ ಮತ್ತು ಬರಹಗಾರರಾಗಿರುವ ಅಶೋಕ ಹಾಸ್ಯಗಾರ ಅವರು ಪತ್ರಕರ್ತ, ಕವಿ ಮತ್ತು ಅಂಕಣಕಾರರಾಗಿ ಪ್ರಸಿದ್ಧರಾಗಿದ್ದಾರೆ. ಹತ್ತು ವರ್ಷಗಳಿಗೂ ಮೀರಿ ಅಧ್ಯಯನ ನಡೆಸಿ ಅವರು ರಚಿಸಿದ ‘ದಶರೂಪಕಗಳ ದಶಾವತಾರ’ ಎಂಬ ಕೃತಿಯು ಅಪರೂಪದಲ್ಲಿ ಅಪರೂಪವಾದ ಸಂಶೋಧನಾ ಗ್ರಂಥವಾಗಿದೆ. ಇದು ಪ್ರಕಟವಾದ ಬೆನ್ನಲ್ಲೇ ಮಂಗಳೂರು ವಿಶ್ವ ವಿದ್ಯಾಲಯದ ‘ಯಕ್ಷಮಂಗಳ’ ಪ್ರಶಸ್ತಿ ಅರಸಿ ಬಂದಿತ್ತು.
ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕಾಸ್ಟಿಕ್ ಸೋಡಾ ಕಾರ್ಖಾನೆಯಲ್ಲಿ ಮೊದಲು ಉದ್ಯೋಗಿಯಾಗಿದ್ದ ಅವರು ನಂತರ ಮಾಧ್ಯಮ ರಂಗವನ್ನು ಪ್ರವೇಶಿಸಿದರು. ʼಕರಾವಳಿ ಮುಂಜಾವುʼ, ‘ಲೋಕ ಧ್ವನಿ’, ‘ಜನಮಾಧ್ಯಮ’ ಮೊದಲಾದ ಪತ್ರಿಕೆಗಳಲ್ಲಿ ಸಂಪಾದಕರಾಗಿ ಕೆಲಸ ಮಾಡಿದ್ದಾರೆ.

ಇವರಿಗೆ ಅನೇಕ ಪ್ರಶಸ್ತಿಗಳು ಸಂದಿವೆ. ಅವುಗಳಲ್ಲಿ ‘ಸೂರಿ ವೆಂಕಟರಮಣ ಶಾಸ್ತ್ರಿ ಪ್ರಶಸ್ತಿ’ ಮತ್ತು ‘ಯಕ್ಷಮಂಗಳ ಪ್ರಶಸ್ತಿ’ ಮಹತ್ವದ್ದಾಗಿವೆ. ಪ್ರಸ್ತುತ, ಅವರು ಕಾವ್ಯಕ್ಕೆ ಸಂಬಂಧಿಸಿದಂತೆ ಭಾರತೀಯ ಮತ್ತು ಪಾಶ್ಚಿಮಾತ್ಯ ಕಾವ್ಯಮೀಮಾಂಸೆಯ ತುಲನಾತ್ಮಕ ಅಧ್ಯಯನದ ಕಾವ್ಯದ ಮಹತ್ವವನ್ನು ಸಾರುವ ‘ಭಾರತೀಯ ಕಾವ್ಯ ವಿಲಾಸ’ ಎಂಬ ಸಂಶೋಧನಾ ಗ್ರಂಥವನ್ನು ಪ್ರಕಟಿಸುತ್ತಿದ್ದಾರೆ.
Publisher: ಕನ್ನಡ ನಾಡು | Kannada Naadu