ಬೆಂಗಳೂರು : ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಗೋವಾದಲ್ಲಿನ ಎಲ್ಲಾ ಕನ್ನಡಪರ ಸಂಘಟನೆಗಳ ಸಹಯೋಗದಲ್ಲಿ ಗೋವಾ ಗಡಿ ಕನ್ನಡಿಗರ ಸಮಸ್ಯೆಗಳ ಕುರಿತು ‘ಗೋವಾ ಕನ್ನಡಿಗರ ಸಮಾಲೋಚನಾ ಸಭೆ’ಯನ್ನು ನವೆಂಬರ್ 25 ರಂದು ಗೋವಾದ ಝರಿ ಜುವಾರಿನಗರದ ಶ್ರೀ ಯಲಾಲಿಂಗೇಶ್ವರ ಮಠದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸಭೆಯಲ್ಲಿ ವಿಶೇಷವಾಗಿ ಗೋವಾದಲ್ಲಿ ನೆಲೆಸಿರುವ ಜನರು ತಮ್ಮದೇ ವಿವಿಧ ಕ್ಷೇತ್ರಗಳಲ್ಲಿ, ಕಾರ್ಯ ನಿರ್ವಹಿಸುತ್ತಾ ಬಂದಿರುವ ಗೋವಾ ಗಡಿ ಕನ್ನಡಿಗರನ್ನು ‘ಘಾಟಿ ಲೋಗ್’ ಎಂಬುದಾಗಿ ಅವಾಚ್ಯ ಶಬ್ದಗಳಿಂದ ಸಂಭೋದಿಸಿ, ಹಿಯಾಳಿಸುತ್ತಿರುವುದು ಅವರ ಭಾವನೆಗಳಿಗೆ ಧಕ್ಕೆ, ತರುವುದಲ್ಲದೆ ಒಂದು ರೀತಿಯ ಜನಾಂಗೀಯ ನಿಂದನೆಯಾಗುವುದಾಗಿ ಅನೇಕ ಗೋವಾ ಕನ್ನಡಿಗರು ನೊಂದು ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ತಮ್ಮ ಕಳಕಳಿಯನ್ನು ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಗಡಿ ಪ್ರಾಧಿಕಾರದ ಅಧ್ಯಕ್ಷರಾದ ಸೋಮಣ್ಣ ಬೇವಿನಮರದರವರು ಕೂಡಲೇ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳ ಹಾಗೂ ಗೋವಾ ಸರ್ಕಾರದ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಕರ್ನಾಟಕ ಸರ್ಕಾರದ ಐಜಿಪಿ ಮಟ್ಟದ ಹಿರಿಯ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಿ ಗೋವಾ ಸರ್ಕಾರದ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಈ ವಿಷಯದ ಕುರಿತು ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಲಾಗುವುದೆಂದು ತಿಳಿಸಿದರು.
ಕೆಲವು ಗೋವಾ ಕನ್ನಡಿಗರ ಜನಾಂಗೀಯ ನಿಂದನೆಯ ಕುರಿತು ಕೇಂದ್ರ ಸರ್ಕಾರದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಹಾಗೂ ಕೇಂದ್ರ ಸರ್ಕಾರದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಆಯೋಗದ ಮೂಲಕ ಗೋವಾ ಸರ್ಕಾರಕ್ಕೆ ಸೂಕ್ತ ಸಲಹೆ ನೀಡುವಂತೆ ಮನವಿ ಸಲ್ಲಿಸಲು ನಿರ್ಣಯಿಸಲಾಯಿತು.
ಕನ್ನಡಿಗರ ನಿಂದನೆಗೆ ಪ್ರತಿಕ್ರಿಯೆಯಾಗಿ ಸ್ಥಳೀಯ ಕನ್ನಡಿಗರಿಂದ ಒಂದು ಮೌನ ಪ್ರತಿಭಟನೆಯ ಮೂಲಕ ಗೋವಾ ಸರ್ಕಾರದ ಗಮನ ಸೆಳೆಯಲು ಮುಂದಿನ ದಿನಗಳಲ್ಲಿ ರೂಪುರೇμÉ ಹಾಕಿಕೊಳ್ಳಲು ತೀರ್ಮಾನಿಸಲಾಯಿತು. ಗೋವಾದಲ್ಲಿರುವ ವಲಸೆ ಕಾರ್ಮಿಕರ ಮಕ್ಕಳ ಅಂದರೆ ಗೋವಾದಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದು ಕರ್ನಾಟಕದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ದಾಖಲೆ ಸಂಖ್ಯೆ ಇರುವ ಸಮಸ್ಯೆಯ ಬಗ್ಗೆ, ಕರ್ನಾಟಕ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ, ಇವರಿಗೆ ನಿರ್ದೇಶನ ನೀಡಲು ಕೋರಲಾಗುವುದೆಂದು ಗಡಿ ಪ್ರಾಧಿಕಾರದಿಂದ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಗೋವಾ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ವಿ.ಕಾಂಡವೇಲು ಅವರನ್ನು ಭೇಟಿ ಮಾಡಿ ಗಡಿ ಪ್ರಾಧಿಕಾರದಿಂದ ಗೋವಾದಲ್ಲಿ ಕನ್ನಡ ಭವನ ಕಟ್ಟಡ ನಿರ್ಮಾಣಕ್ಕಾಗಿ ಈಗಾಗಲೇ ನಿವೇಶನ ಖರೀದಿಸಿದ್ದು. ಕನ್ನಡ ಭವನ ನಿರ್ಮಾಣಕ್ಕೆ ಅನುಮತಿ ನೀಡುವಂತೆ ಗಡಿ ಪ್ರಾಧಿಕಾರದ ಅಧ್ಯಕ್ಷರಾದ ಸೋಮಣ್ಣ ಬೇವಿನಮರದ, ಕಾರ್ಯದರ್ಶಿಗಳಾದ ಪ್ರಕಾಶ್ ಮತ್ತಿಹಳ್ಳಿರವರಿಂದ ಮನವಿ ಸಲ್ಲಿಸಿದರು. ಗೋವಾ ರಾಜ್ಯದ ವಿವಿಧ ಇಲಾಖೆಗಳಾದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಅರಣ್ಯ ಇಲಾಖೆ, ನಗರ ಯೋಜನೆ ಇಲಾಖೆಯ ಮುಖ್ಯಸ್ಥರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.
ಸಭೆಯಲ್ಲಿ ಮಂಜುನಾಥ ನಾಟೀಕರ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರು, ಸಿದ್ದಣ್ಣ ಮೇಟಿ, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್, ಗೋವಾ ಘಟಕ, ಮುರಳಿ ಮೋಹನ್ ಶೆಟ್ಟಿ, ಶ್ರೀಮತಿ ಮಮತಾ, ಗೋವಾ, ರಾಜೇಶ್ ಶೆಟ್ಟಿ, ಅಶೋಕ್ ಸನದಿ, ಪ್ರಕಾಶ್ ಭಟ್, ಪತ್ರಕರ್ತರು, ಶಿವಾನಂದ ಬಿಂಗಿ, ಮಕಾನದಾರ್, ಬೆಳಗಾವಿ ಹಾಗೂ ಗಡಿ ಪ್ರಾಧಿಕಾರದ ಸದಸ್ಯರುಗಳಾದ ಅಶೋಕ್ ಚಂದರಗಿ, ಬೆಳಗಾವಿ, ಶಿವರೆಡ್ಡಿ, ಕೊಪ್ಪಳ ಜಿಲ್ಲೆ, ಎಂ.ಎಸ್.ಮದಭಾವಿ, ವಿಜಯಪುರ, ಸಂಜೀವ್ ಕುಮಾರ್ ಅತಿವಾಳೆ, ಬೀದರ್, ಎ.ಆರ್.ಸುಬ್ಬಯ್ಯಕಟ್ಟಿ, ಕಾಸರಗೋಡು, ಕೇರಳ, ಭಗತರಾಜ್ ನಿಜಾಮಕಾರಿ, ರಾಯಚೂರು, ಇವರು ಭಾಗವಹಿಸಿದ್ದರು.
