

ಇದು, ನಮ್ಮ ಪೂರ್ವಜರ ಋಣ ತೀರಿಸಲು ಸಿಗುವ ಸುವರ್ಣಾವಕಾಶ. ನಮ್ಮನ್ನು ಹೆತ್ತು, ಹೊತ್ತು, ಸಾಕಿದ ಮಾತಾಪಿತೃಗಳು, ಅವರ ಮಾತಾಪಿತೃಗಳು, ಮತ್ತವರ ಮಾತಾಪಿತೃಗಳು; ನಮ್ಮ ಮೇಲೆ ಪ್ರೀತಿ ತೋರಿದ ಜೊತೆಗೆ ಕೆಲವೊಮ್ಮೆ ದ್ವೇಷ ಕಾರಿದ ಬಂಧುಗಳು; ನೆರಳಂತೆ ಕಷ್ಟದಲ್ಲಿ ಕಾಪಾಡಿದ, ಆಗಾಗ ಕಾಡಿದ ಸ್ನೇಹಿತರು; ಹಾಗೂ ಅಕ್ಷರ ಸಂಪತ್ತನ್ನು ಕರುಣಿಸಿ ನಮ್ಮನ್ನು ಉನ್ನತೀಕರಿಸಿದ ಗುರುಗಳು - ಇವರಿಗೆಲ್ಲಾ ಪಿಂಡಪ್ರದಾನದ ಜೊತೆ ತಿಲ ತರ್ಪಣ ನೀಡುವ ಸುಸಮಯ ಇದು. ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳೋಣ. ನಮ್ಮ ಪೂರ್ವಜರು ಮತ್ತು ಗುರುಗಳಿಗೆ ಸದ್ಗತಿ ನೀಡಲಿ ಹಾಗೂ ನಮ್ಮನ್ನು ಅನುಗ್ರಹಿಸಲಿ ಎಂದು ಶ್ರೀಮಧ್ವವಲ್ಲಭ ಜನಾರ್ಧನ ರೂಪಿ ಶ್ರೀವಾಸುದೇವನನ್ನು ಬೇಡೋಣ.
ಭಾದ್ರಪದ ಮಾಸದ ಹುಣ್ಣಿಮೆಯಿಂದ 15 ದಿನಗಳ ಅವಧಿಯನ್ನು ಮಹಾಲಯ ಪಕ್ಷ ಅಥವಾ ಪಿತೃಪಕ್ಷ ಎನ್ನಲಾಗುತ್ತದೆ. ಗರುಡ ಪುರಾಣದ ಪ್ರಕಾರ, ನಮ್ಮ ಪೂರ್ವಜರು ನಮ್ಮತ್ತ ಗಮನ ಹರಿಸುವ ಸಮಯವಿದು. ಹಾಗಾಗಿ, ಈ ಹದಿನೈದು ದಿನಗಳ ಕಾಲ ನಿತ್ಯ ಹಿರಿಯರನ್ನು ಸ್ಮರಿಸಿ ಅವರಿಗೆ ಪಿಂಡ ಪ್ರದಾನ ಮತ್ತು ತಿಲ ತರ್ಪಣ ನೀಡಬೇಕು. ಪಿಂಡ ಪ್ರದಾನ ಸಾಧ್ಯವಾಗದವರು ತಿಲ ತರ್ಪಣವನ್ನು ನೀಡಬೇಕು. ಇದು ಕೂಡ ಸಾಧ್ಯವಾಗದಿದ್ದರೆ, ತಂದೆ ಗತಿಸಿ ಹೋಗಿದ್ದರೆ, ಅವರ ಮೃತಪಟ್ಟ ತಿಥಿಯಂದು ಮಹಾಲಯ ಪಕ್ಷ ಆಚರಿಸಬೇಕು. ಇದೆಲ್ಲಾ ಸಾಧ್ಯವೇ ಇಲ್ಲ ಎನ್ನುವವರು ಮಹಾಲಯ ಅಮಾವಾಸ್ಯೆಯಂದಾದರೂ ಪಿತೃಕಾರ್ಯ ನಡೆಸಬೇಕು.
ಈ ಪಕ್ಷದಲ್ಲಿ ನಿತ್ಯ ದೇವರ ಪೂಜೆಯ ಹೊರತು ಯಾವುದೇ ದೇವತಾ ಕಾರ್ಯ ಮಾಡುವುದು ಶ್ರೇಯಸ್ಕರವಲ್ಲ. ಏಕೆಂದರೆ, ನಮ್ಮ ಪಿತೃಗಳೇ ದೇವತೆಗಳಾಗಿ ಬಂದು ನಾವು ಮಾಡುವ ಪಿತೃಕಾರ್ಯದಿಂದ ತೃಪ್ತರಾಗಿ ನಮ್ಮನ್ನು ಋಣಮುಕ್ತರನ್ನಾಗಿ ಮಾಡುತ್ತಾರೆ. ಹಾಗಾಗಿ, ನಾವು ಪಿಂಡ ಪ್ರದಾನ ಮತ್ತು ತಿಲ ತರ್ಪಣದಿಂದ ಅವರನ್ನೇ ಸಂತೃಪ್ತಿಪಡಿಸಬೇಕು.
ಪಿತೃಪಕ್ಷದಲ್ಲಿ ಮಹಾಭರಣಿ, ಅವಿಧವಾ ನವಮಿ (ಗತಿಸಿದ ಮುತ್ತೈದೆಯರಿಗಾಗಿ ನಡೆಸುವ ಶ್ರಾದ್ಧ), ಯತಿ ದ್ವಾದಶಿ ಹಾಗೂ ಘಾತ ಚತುರ್ದಶಿ (ಅಪಘಾತದಿಂದ, ಅಸ್ತ್ರ ಶಸ್ತ್ರಗಳಿಂದ ಮೃತಪಟ್ಟವರು) ಮತ್ತು ಮಹಾಲಯ ಅಮಾವಾಸ್ಯೆ ವಿಶೇಷ ದಿನಗಳು.
ಈ ಹದಿನೈದು ದಿನಗಳ ಕಾಲ ನಿತ್ಯ ಶ್ರಾದ್ಧ ಮಾಡುವವರು, ಮನೆಯ ಮುಂದೆ ರಂಗೋಲಿ ಹಾಕಬಾರದು. ಬಾಗಿಲಿಗೆ ಮಾವಿನ ತೋರಣ ಮತ್ತು ಹೂವುಗಳನ್ನು ಹಾಕಬಾರದು ಎನ್ನುತ್ತಾರೆ ಹಿರಿಯರು. ಈ ರೀತಿ ಶುಭಕರವಾಗಿ ತಳಿರು ತೋರಣದಿಂದ ಬಾಗಿಲನ್ನು ಅಲಂಕರಿಸಿದರೆ, ಸೂಕ್ಷ್ಮ ರೂಪದಲ್ಲಿನ ನಮ್ಮ ಪೂರ್ವಜರು ಮನೆಯೊಳಗೆ ಬರುವುದಿಲ್ಲವಂತೆ. ಕೆಲವರು ಪಿತೃಪಕ್ಷದ ಶ್ರಾದ್ಧವನ್ನು ಮನೆಯಲ್ಲಿ ಮಾಡದೆ, ನದೀತೀರದ ಪುಣ್ಯಕ್ಷೇತ್ರಗಳಲ್ಲಿ ಮಾಡುತ್ತಾರೆ. ಮನೆಯಲ್ಲಿ ಆಚರಣೆ ಮಾಡುವುದು ಇದಕ್ಕಿಂತ ಪುಣ್ಯಕರವಾದುದು. ಆದ್ದರಿಂದ, ಸಾಧ್ಯವಾದರೆ ಮನೆಯಲ್ಲೇ ಮಾಡಲು ಪ್ರಯತ್ನಿಸಿ. ಪಿತೃಗಳನ್ನು ಸ್ಮರಿಸಿ, ಅವರ ಋಣ ತೀರಿಸಿ.
ಗಯಾ ಗದಾಧರನು ನಮ್ಮೆಲ್ಲರ ಪಿತೃಗಳನ್ನು ತನ್ನ ಚರಣಗಳಲ್ಲಿ ಲೀನ ಮಾಡಿಕೊಂಡು, ನಮಗೆ ಪಿತೃಗಳ ಆಶೀರ್ವಾದದ ಜೊತೆಗೆ ತನ್ನ ಅನುಗ್ರಹವನ್ನು ಕರುಣಿಸಲಿ ಎಂದು ಬೇಡೋಣ. ಗಯಾ ಕ್ಷೇತ್ರದ ಶ್ರೀಮಹಾವಿಷ್ಣುವಿನ ಪಾದದ ಮೇಲೆ ಶ್ರಾದ್ಧ ಮಾಡಿದ ಫಲ ನಮಗೆಲ್ಲ ಪ್ರಾಪ್ತಿಯಾಗಲಿ.

ಶ್ರೀಶ ಚರಣಾರಾಧಕ:
ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ,
ಆನೇಕಲ್.

Publisher: ಕನ್ನಡ ನಾಡು | Kannada Naadu