ಬೆಂಗಳೂರು : ರಾಜ್ಯದಾದ್ಯಂತ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯ ಮಾಹಿತಿಯನ್ನು ಮೇ 5ರಿಂದ ಮನೆ-ಮನೆಗೆ ಭೇಟಿ ನೀಡಿ ಸಂಗ್ರಹಿಸುತ್ತಿದ್ದು, ಮೊದಲ ಹಂತದಲ್ಲಿ ಮೇ 15ರ ವರೆಗೆ 18.96 ಲಕ್ಷ ಸಮೀಕ್ಷೆ ಮಾಡಲಾಗಿದ್ದು, ಶೇ.73.72 ರಷ್ಟು ಗುರಿ ಸಾಧಿಸಲಾಗಿದೆ ಎಂದು ಪರಿಶಿಷ್ಟ ಜಾತಿ ಒಳ ಮೀಸಲಾತಿಯ ಏಕಸದಸ್ಯ ಆಯೋಗದ ಅಧ್ಯಕ್ಷರಾದ ನ್ಯಾಯಮೂರ್ತಿ ಡಾ.ಹೆಚ್.ಎನ್.ನಾಗಮೋಹನ್ ದಾಸ್ ಅವರು ತಿಳಿಸಿದರು.
ಇಂದು ವಿಧಾನಸೌಧದಲ್ಲಿ ಪರಿಶಿಷ್ಟ ಜಾತಿ/ಉಪಜಾತಿಗಳ ಸಮಗ್ರ ಸಮೀಕ್ಷೆ 2025ರ ವರದಿ ನೀಡಲು ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ನ್ಯಾಯಮೂರ್ತಿಗಳು, ರಾಜ್ಯದಲ್ಲಿ 2011ರ ಜನಗಣತಿ ಹಾಗೂ ಇಲ್ಲಿಯವರೆಗೆ ನಡೆದಿರುವ ಸಮೀಕ್ಷೆಯ ಜನಗಣತಿಯಲ್ಲಿ ಶೇ.43ರಷ್ಟು ಪರಿಶಿಷ್ಟ ಜಾತಿಯ ಸಮುದಾಯದವರು ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂಬುದಾಗಿ ನಮೂದಿಸಿದ್ದು, ಈ ಮೂರು ಜಾತಿಗಳಲ್ಲಿ ಅನೇಕ ಮೂಲ ಜಾತಿಗಳು ಸೇರಿಕೊಂಡಿರುವುದರಿಂದ ಪರಿಶಿಷ್ಟ ಜಾತಿಗಳ ವೈಜ್ಞಾನಿಕ ಉಪವರ್ಗೀಕರಣಕ್ಕೆ ಅಡ್ಡಿಯಾಗಿದೆ ಎಂದರು.
ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳ ವೈಜ್ಞಾನಿಕ ವರ್ಗೀಕರಣ ಮಾಡಲು ದತ್ತಾಂಶವನ್ನು ಸಂಗ್ರಹಿಸಲು ಹೊಸದಾಗಿ ಸಮೀಕ್ಷೆ ನಡೆಸಲು ಮಾರ್ಚ್ 27, 2025ರ ಆಯೋಗದ ಮಧ್ಯಂತರ ವರದಿಯಲ್ಲಿ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ. ಶಿಫಾರಸ್ಸಿನ ಅನ್ವಯ ಪರಿಶಿಷ್ಟ ಜಾತಿಯ ಮೂಲ ಜಾತಿಗಳ ಜನಸಂಖ್ಯೆ, ಕುಟುಂಬಗಳ ಸಂಖ್ಯೆ ಹಾಗೂ ಅವರುಗಳು ಪಡೆದಿರುವ ಶಿಕ್ಷಣ, ವೃತ್ತಿ, ವಾಸಿಸುವ ಪ್ರದೇಶ, ಹೊಂದಿರುವ ಸೌಲಭ್ಯಗಳು ಮುಂತಾದ ಸಾಮಾನ್ಯ ಮಾಹಿತಿಗಳು ಹಾಗೂ ಆರ್ಥಿಕತೆಗೆ ಸಂಬಂಧಿಸಿದ ಮಾಹಿತಿ, ಸರ್ಕಾರಿ ಉದ್ಯೋಗ, ಖಾಸಗಿ ಉದ್ಯೋಗ, ವೃತ್ತಿ, ಭೂಮಿಯ ಒಡೆತನ, ಮನೆ, ಆದಾಯ, ಮಾನವ ಅಭಿವೃದ್ಧಿ, ಸರ್ಕಾರದಿಂದ ಪಡೆದಿರುವ ಸೌಲಭ್ಯ, ರಾಜಕೀಯ ಪ್ರಾತಿನಿಧ್ಯತೆ ಇತ್ಯಾದಿ ವಿಷಯಗಳ ಕುರಿತು ಸಮಗ್ರವಾದ ಮಾಹಿತಿಯನ್ನು ಸರ್ಕಾರದ ವತಿಯಿಂದ ಸಮೀಕ್ಷೆ ನಡೆಸಲಾಗುತ್ತಿದೆ ಎಂದರು.
ಸಮೀಕ್ಷೆಯನ್ನು ಆಧುನಿಕ ತಂತ್ರಜ್ಞಾನದ ಸಾಧನಗಳನ್ನು ಬಳಸಿಕೊಂಡು ಕರ್ನಾಟಕ ಸರ್ಕಾರದ ಇ-ಆಡಳಿತ ಇಲಾಖೆಯ ಅಧೀನದಲ್ಲಿನ ಇ.ಡಿ.ಸಿ.ಎಸ್ ರವರು ಅಭಿವೃದ್ಧಿಪಡಿಸಿರವ ಮೊಬೈಲ್ ಆ್ಯಪ್ ಮೂಲಕ ನಡೆಸಲಾಗುತ್ತಿದೆ.
ಕೆಲವೊಂದು ಅಪಾರ್ಟ್ಮೆಂಟ್ಗಳಲ್ಲಿ ಸಮೀಕ್ಷೆ ನಡೆಸುವ ಗಣತಿದಾರರಿಗೆ ಅಡ್ಡಿಪಡಿಸುತ್ತಿರುವುದು ಕಂಡು ಬಂದಿದೆ. ಇದು ಅಪರಾಧವಾಗಿದ್ದು, ಸಮೀಕ್ಷೆಗೆ ಅಡ್ಡಿಪಡಿಸದೆ ಸಹಕರಿಸಬೇಕು. ತೊಂದರೆ ಮಾಡುವವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದರು.
ಮೇ 17ರ ವರೆಗೆ ಇದ್ದ ಸಮೀಕ್ಷೆಯ ಅವಧಿಯನ್ನು ಮೇ 25ರ ವರೆಗೆ ವಿಸ್ತರಿಸಲಾಗಿದ್ದು, ಪರಿಶಿಷ್ಟ ಜಾತಿಯ ಜನರೆಲ್ಲರೂ ಸಮೀಕ್ಷೆಯಲ್ಲಿ ತಪ್ಪದೇ ಭಾವಹಿಸಿ ತಮ್ಮ ಜಾತಿಯ ಬಗ್ಗೆ ನಿಖರವಾದ ಮಾಹಿತಿಯನ್ನು ನೀಡುವುದರೊಂದಿಗೆ ಸಂಪೂರ್ಣ ಸಹಕಾರ ನೀಡಬೇಕೆಂದರು.
ಇದೇ ಸಂದರ್ಭದಲ್ಲಿ ಸಮೀಕ್ಷೆ ನಡೆಸುವ ಸಮಯದಲ್ಲಿ ಇತ್ತೀಚೆಗೆ ಕಲ್ಬುರ್ಗಿಯಲ್ಲಿ ಹೃದಯಾಘಾತದಿಂದ ನಿಧನರಾದ ಗಣತಿದಾರ ನಾಗಶೆಟ್ಟಿ ಅವರಿಗೆ ಸಂತಾಪ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ಅವರ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ ನೀಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದರು.
ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಾದ ರಾಕೇಶ್ ಕುಮಾರ್ ಅವರು ಮಾತನಾಡಿ, ಶಾಸಕರುಗಳು, ಹಲವು ಸಂಘ-ಸಂಸ್ಥೆಗಳು ಸಮೀಕ್ಷಾ ದಿನಾಂಕದ ಅವಧಿಯನ್ನು ವಿಸ್ತರಿಸುವಂತೆ ಕೋರಿದ್ದರು. ಆ ಹಿನ್ನೆಲೆಯಲ್ಲಿ ಸಮೀಕ್ಷೆಯನ್ನು ಮೂರು ಹಂತಗಳಲ್ಲಿ ನಡೆಸಲಾಗುತ್ತಿದ್ದು, ಮೊದಲ ಹಂತವಾಗಿ ಮನೆ-ಮನೆ ಭೇಟಿ ಮೇ 25ರ ವರೆಗೆ. ಸಮೀಕ್ಷಾ ಬ್ಲಾಕ್ ವ್ಯಾಪ್ತಿಯಲ್ಲಿ ಮೇ 26 ರಿಂದ 28ರ ವರೆಗೆ ವಿಶೇಷ ಶಿಬಿರ. ಮೇ 19 ರಿಂದ 28ರ ವರೆಗೆ ಆನ್ಲೈನ್ ಮೂಲಕ ಸ್ವಯಂ ಘೋಷಣೆ ಸಮೀಕ್ಷೆ ಹಮ್ಮಿಕೊಳ್ಳಲಾಗಿದೆ ಎಂದರು.
ಸಮೀಕ್ಷೆಯನ್ನು ಪರಿಣಾಮಕಾರಿಯಾಗಿ ಮಾಡಲು ಜಿಲ್ಲಾ ಹಂತದಲ್ಲಿ ಗುರುತಿಸಲಾಗಿರುವ ಮಾಸ್ಟರ್ ಟ್ರೈನರ್ಗಳಿಗೆ ರಾಜ್ಯ ಮಟ್ಟದಲ್ಲಿ ತರಬೇತಿ ನೀಡಲಾಗಿದ್ದು, ಇವರ ಮೂಲಕ ತಾಲ್ಲೂಕು ಮಟ್ಟದ ಮಾಸ್ಟರ್ ಟ್ರೈನರ್ಗಳಿಗೆ ಜಿಲ್ಲಾ ಮಟ್ಟದಲ್ಲಿ ತರಬೇತಿ ನೀಡಲಾಗಿದೆ. ಮನೆ-ಮನೆ ಸಮೀಕ್ಷೆಗೆ ನೇಮಕ ಮಾಲಾಗಿರುವ 65,115 ಗಣತಿದಾರರು ಮತ್ತು 5,265 ಮೇಲ್ವಿಚಾರಕರಿಗೆ ಸಮೀಕ್ಷೆಯ ಕುರಿತು ತಾಲ್ಲೂಕು ಮಟ್ಟದಲ್ಲಿ ತರಬೇತಿಯನ್ನು ನೀಡಲಾಗಿದೆ. ಸಮೀಕ್ಷೆಯ ವೇಳೆ ಉದ್ಭವಿಸುವ ತಾಂತ್ರಿಕ ಹಾಗೂ ಇನ್ನಿತರೆ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡಲು ಸಹ ತರಬೇತಿ ನೀಡಲಾಗಿದೆ ಎಂದರು.
ಸಮೀಕ್ಷೆಯ ಸಮಯದ ಆರಂಭಿಕ ಹಂತದಲ್ಲಿ ತಾಂತ್ರಿಕ ತೊಂದರೆಗಳನ್ನು ಹೊರತುಪಡಿಸಿ ಸಮೀಕ್ಷೆಯು ಸುಗಮವಾಗಿ ನಡೆಯುತ್ತಿದೆ. 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ 21,40,304 ಪರಿಶಿಷ್ಟ ಪಂಗಡಗಳಿದ್ದು, 2025ರ ವೇಳೆಗೆ ಸುಮಾರು 25,72,050 ಪರಿಶಿಷ್ಟ ಜಾತಿ ಕುಟುಂಬಗಳು ಇರಬಹುದೆಂದು ಅಂದಾಜಿಸಲಾಗಿದೆ. ರಾಜ್ಯದ 31 ಜಿಲ್ಲೆಗಳಲ್ಲಿ 18,41,258 ಪರಿಶಿಷ್ಟ ಜಾತಿ ಕುಟುಂಬಗಳನ್ನು ಹಾಗೂ ಪರಿಶಿಷ್ಟ ಜಾತಿಗೆ ಸೇರದ 97,06,233 ಕುಟುಂಬಗಳ ಸಮೀಕ್ಷೆ ಮಾಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 55,027 ಪರಿಶಿಷ್ಟ ಜಾತಿ ಕುಟುಂಬ, 13,26,323 ಪರಿಶಿಷ್ಟ ಜಾತಿಗೆ ಸೇರದ ಕುಟುಂಬಗಳ ಸಮೀಕ್ಷೆಮಾಡಲಾಗಿದೆ ಎಂದರು.
ಜಿಲ್ಲಾವಾರು ಬಾಗಲಕೋಟೆ-61,758, ಬಳ್ಳಾರಿ-46,774, ಬೆಂಗಳೂರು ಗ್ರಾಮಾಂತರ-43,536, ಬಿಬಿಎಂಪಿ-55,027, ಬೆಳಗಾವಿ-1,15,686, ಬೆಂಗಳೂರು-38,769, ಬೀದರ್-61,139 ಚಾಮರಾಜನಗರ-52,860, ಚಿಕ್ಕಬಳ್ಳಾಪುರ-63,879, ಚಿಕ್ಕಮಗಳೂರು-47,527, ಚಿತ್ರದುರ್ಗ-79,313, ದಕ್ಷಿಣ ಕನ್ನಡ-26,262, ದಾವಣಗೆರೆ-74,557, ಧಾರವಾಡ-35,171, ಗದಗ-34,759, ಹಾಸನ-73,910, ಹಾವೇರಿ-49,748, ಕಲಬುರಗಿ-1,15,940, ಕೊಡಗು-15,494, ಕೋಲಾರ-80,355, ಕೊಪ್ಪಳ-47,766, ಮಂಡ್ಯ-61,481, ಮೈಸೂರು-1,04,939, ರಾಯಚೂರು-79,194, ರಾಮನಗರ-42,044, ಶಿವಮೊಗ್ಗ-54,209, ತುಮಕೂರು-1,10,235, ಉಡುಪಿ-14,631, ಉತ್ತರಕನ್ನಡ-23,965, ವಿಜಯನಗರ-57,363, ವಿಜಯಪುರ-77,449, ಯಾದಗಿರಿ-50,545 ಒಟ್ಟು 18,96,285 ಪರಿಶಿಷ್ಟಜಾತಿ ಕುಟುಂಬಗಳ ಸಮೀಕ್ಷೆ ನಡೆಸಲಾಗಿದೆ ಎಂದರು.
ಪ್ರಾರಂಭಿಕ ಹಂತದ ಸಮೀಕ್ಷೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಗತಿಯು ಕುಂಠಿತವಾಗಿದ್ದು, ಈ ಕುರಿತು ಬಿಬಿಎಂಪಿ ಮುಖ್ಯಸ್ಥರೊಂದಿಗೆ ಸಭೆ ನಡೆಸಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲಾ ಶಿಕ್ಷಕರ ಕೊರತೆಯಿರುವುದರಿಂದ, ಸಮರ್ಪಕವಾಗಿ ಸಮೀಕ್ಷೆಯನ್ನು ಕೈಗೊಳ್ಳಲು ಪದವಿ ಹೊಂದಿದ ಆಶಾ ಕಾರ್ಯಕರ್ತೆಯರನ್ನು ಅಥವಾ ಅಂಗನವಾಡಿ ಕಾರ್ಯಕರ್ತರನ್ನು ಗಣತಿದಾರರನ್ನಾಗಿ ನೇಮಕ ಮಾಡಲು ಸೂಚಿಸಲಾಗಿದೆ.
ಸಮೀಕ್ಷೆ ವೇಳೆ ಉದ್ಬವಿಸುವ ಪ್ರಶ್ನೆಗಳಿಗೆ ಸರಿಯಾದ ಮಾಹಿತಿ ನೀಡಲು ರಾಜ್ಯ ಮಟ್ಟದ ಸಹಾಯವಾಣಿ ಸಂಖ್ಯೆ 9481359000ನ್ನು ಸ್ಥಾಪಿಸಲಾಗಿದೆ. ಸಹಾಯವಾಣಿಯಲ್ಲಿ ಒಟ್ಟು 15 ಆನ್ಲೈನ್ಗಳನ್ನು ಅಳವಡಿಸಲಾಗಿದೆ.
ಪತ್ರಿಕಾ ಗೋಷ್ಠಿಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರಾದ ಕಾಂತರಾಜು, ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೇಜರ್ ಮಣಿವಣ್ಣನ್, ಇಡಿಸಿಎಸ್ ಮುಖ್ಯಸ್ಥ ಯತೀಶ್ ಉಪಸ್ಥಿತರಿದ್ದರು.
Publisher: ಕನ್ನಡ ನಾಡು | Kannada Naadu