ಬೆಂಗಳೂರು : ಇಂದು ವಿಧಾನಪರಿಷತ್ತಿನ ಅಧಿವೇಶನದ ಸಮಯದಲ್ಲಿ ವಿಧಾನ ಸಭೆಯಿಂದ ತಿದ್ದುಪಡಿಯೊಂದಿಗೆ ಅಂಗೀಕೃತ ರೂಪದಲ್ಲಿರುವ 2025ನೇ ಸಾಲಿನ “ಕರ್ನಾಟಕ ಗಿರವಿದಾರರ (ತಿದ್ದುಪಡಿ) ವಿಧೇಯಕ”ವನ್ನು ಸಹಕಾರ ಸಚಿವರಾದ ಕೆ.ಎನ್. ರಾಜಣ್ಣ ಅವರು ಮಂಡಿಸುತ್ತಾ, ಬಲವಂತದ ವಸೂಲಾತಿಗಳನ್ನು ನಿಯಂತ್ರಿಸುವ ಸಲುವಾಗಿ, ಶಿಕ್ಷೆ, ದಂಡನೆಗಳಿಗೆ ತಿದ್ದುಪಡಿ ತರಲಾಗಿದೆ. ಈ ವಿಧೇಯಕವು ಅಸಹಾಯಕರಿಗೆ ಸಹಾಯ ಮಾಡುವ ಉದ್ದೇಶವಾಗಿದೆ. ಇದರಿಂದ ಸರ್ಕಾರಕ್ಕೆ ಯಾವುದೇ ರೀತಿಯ ಹೊರೆಯಾಗುವುದಿಲ್ಲ. ವಂಚಿತರಿಗೆ ನ್ಯಾಯವನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಈ ವಿಧೇಯಕದಲ್ಲಿ ಒಂಬುಡ್ಸ್ಮನ್ಗಳನ್ನು ನೇಮಕ ಮಾಡಲಾಗಿದೆ ಎಂದು ತಿಳಿಸುತ್ತಾ ವಿಧೇಯಕವನ್ನು ಪರ್ಯಾಲೋಚಿಸುವಂತೆ ಕೋರಿದರು.
ವಿಧೇಯಕವನ್ನು ಸದನದಲ್ಲಿ ಪರ್ಯಾಲೋಚಿಸಿದ ನಂತರ ಮಾನ್ಯ ಸಭಾಪತಿಗಳು ಅಂಗೀಕರಿಸಿದರು.
“ಕರ್ನಾಟಕ ಮಿತಿಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ (ತಿದ್ದುಪಡಿ) ವಿಧೇಯಕ 2025
ವಿಧಾನ ಸಭೆಯಿಂದ ಅಂಗೀಕೃತ ರೂಪದಲ್ಲಿರುವ 2025ನೇ ಸಾಲಿನ “ಕರ್ನಾಟಕ ಮಿತಿಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ (ತಿದ್ದುಪಡಿ) ವಿಧೇಯಕ”ವನ್ನು ಸಹಕಾರ ಸಚಿವರಾದ ಕೆ.ಎನ್. ರಾಜಣ್ಣ ಅವರು ಮಂಡಿಸುತ್ತಾ, ಖಾಸಗಿಯವರು ನೀಡುವ ಸಾಲದಿಂದ ಸಾಲಗಾರರಾಗುವುದನ್ನು ತಪ್ಪಿಸುವ ದೃಷ್ಠಿಯಿಂದ ಹಾಗೂ ಮಿತಿಮೀರಿದ ಬಡ್ಡಿ ವಿಧಿಸುವುದನ್ನು ತಪ್ಪಿಸಿ, ಜನರಿಗೆ ರಕ್ಷಣೆ ನೀಡುವುದು ಆರ್ಥಿಕವಾಗಿ ಬದುಕುವಂತೆ ಮಾಡುವ ಗುರಿಯೊಂದಿಗೆ ಈ ವಿಧೇಯಕವನ್ನು ತರಲಾಗಿದೆ. ಬಡ್ಡಿ ದರ ನಿಗಧಿ ಮಾಡಲು ಆರ್.ಬಿ.ಐ. ಅವರು ಆಯಾ ಸಂಸ್ಥೆಯವರಿಗೆ ವಹಿಸಿದ್ದಾರೆ. ಸರ್ಕಾರವು ಆಗಿಂದಾಗ್ಗೆ ಬಡ್ಡಿದರ ನಿಗದಿ ಪಡಿಸುವ ಅಧಿಕಾರ ಹೊಂದಿದೆ. ಅಮಾಯಕರ ಮೇಲೆ ಬಲವಂತವಾಗಿ ದಬ್ಬಾಳಿಕೆ ಆಗಬಾರದು ಎಂಬ ದೃಷ್ಠಿಯಿಂದ ಈ ವಿಧೇಯಕವನ್ನು ತರಲಾಗಿದ್ದು, ವಿಧೇಯಕವನ್ನು ಪರ್ಯಾಲೋಚಿಸಲು ಸದನದಲ್ಲಿ ಕೋರಿದರು.
ವಿಧಾನ ಪರಿಷತ್ತಿನ ಸದಸ್ಯರಾದ ಕೇಶವ ಪ್ರಸಾದ್, ಟಿ.ಎ. ಶರವಣ, ಪಿ.ಹೆಚ್.ಪೂಜಾರ್, ನವೀನ್, ಸಿ.ಟಿ. ರವಿ, ಪುಟ್ಟಣ್ಣಯ್ಯ, ಪ್ರತಾಪ್ ಸಿಂಹ ನಾಯಕ್, ಎನ್ ರವಿಕುಮಾರ್, ಸುಧಾಮದಾಸ್ ಮತ್ತು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಅವರುಗಳು ಪರ್ಯಾಲೋಚಿಸಿದ ನಂತರ ಸದರಿ ವಿಧೇಯಕವನ್ನು ಮಾನ್ಯ ಸಭಾಪತಿಗಳು ಅಂಗೀಕರಿಸಿದರು.
Publisher: ಕನ್ನಡ ನಾಡು | Kannada Naadu