ಬೆಂಗಳೂರು: ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ವತಿಯಿಂದ ಆರ್ಯ ವೈಶ್ಯ ಸಮುದಾಯದ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿ ಮಾಡುವುದರ ಮೂಲಕ ಕರ್ನಾಟಕ ಆರ್ಯವೈಶ್ಯ ಅಭಿವೃದ್ಧಿ ನಿಗಮವು ಮಹತ್ವದ ಕಾರ್ಯವನ್ನು ನಿರ್ವಹಿಸುತ್ತಿದೆ ಎಂದು ಕಂದಾಯ ಸಚಿವರು ಹಾಗೂ ನಿಗಮದ ಅಧ್ಯಕ್ಷರಾದ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ವಿಕಾಸಸೌಧದ ಕಛೇರಿಯಲ್ಲಿ ಫೆಬ್ರವರಿ 15 ರಂದು ಆಯೋಜಿಸಲಾದ ಕಾರ್ಯಕ್ರಮದಲ್ಲಿ ಪ್ರಸಕ್ತ ಸಾಲಿನಲ್ಲಿ ‘ಸ್ವಯಂ ಉದ್ಯೋಗ ನೇರ ಸಾಲ" ಯೋಜನೆಯಡಿಯಲ್ಲಿ ಆಯ್ಕೆಯಾದ 500 ಫಲಾನುಭವಿಗಳಿಗೆ ರೂ.5.00ಕೋಟಿ ಸಾಲ-ಸಹಾಯಧನವನ್ನು ನೇರ ನಗದು ಪಾವತಿ (ಡಿಬಿಟಿ) ಮೂಲಕ ಹಣ ವರ್ಗಾವಣೆ ಮಾಡಿ ನಂತರ ಮಾತನಾಡಿದ ಸಚಿವರು, ‘ಹೊಸ ಉದ್ಯಮಿಗಳಿಗೆ ಹಾಗೂ ಬಡವರಿಗೆ ಸಹಾಯ ಹಸ್ತ ನೀಡುವ ನಿಟ್ಟಿನಲ್ಲಿ ಆರ್ಯ ವೈಶ್ಯ ನಿಗಮವು ಗಮನಾರ್ಹವಾದ ಕೆಲಸ ನಿರ್ವಹಿಸುತ್ತಿದೆ. ಒಂದು ಲಕ್ಷದ ವರೆಗೆ ವಾರ್ಷಿಕ 4ರ ಬಡ್ಡಿ ದರದಲ್ಲಿ ಸಾಲ-ಸಹಾಯಧನ ನೀಡಲಾಗುತ್ತಿದ್ದು, ಎಲ್ಲರೂ ಈ ಸೌಲಭ್ಯವನ್ನು ಫಲಾನುಭವಿಗಳು ವ್ಯಾಪಾರಕ್ಕಾಗಿ ಬಳಸಿಕೊಳ್ಳಬೇಕು. ತಮ್ಮ ಉದ್ಯಮವನ್ನು ಬೆಳೆಸಿ ತಾವೂ ಸಮಾಜದಲ್ಲಿ ಉನ್ನತ ಮಟ್ಟಕ್ಕೆ ಏರಬೇಕು, ಆರ್ಥಿಕವಾಗಿ ಸ್ವಾವಲಂಭಿಗಳಾಗಬೇಕು" ಎಂದು ತಿಳಿಸಿದರು.
"2024-25ನೇ ಸಾಲಿನಲ್ಲಿ ಆರ್ಯ ವೈಶ್ಯ ನಿಗಮಕ್ಕೆ ಬಿಡುಗಡೆಯಾದ ರೂ.10.00 ಕೋಟಿ ಅನುದಾನದಲ್ಲಿ ಸ್ವಯಂ-ಉದ್ಯೋಗ ನೇರ ಸಾಲ ಯೋಜನೆ, ಅರಿವು ಶೈಕ್ಷಣಿಕ ಸಾಲ ಯೋಜನೆ, ಬ್ಯಾಂಕುಗಳ ಸಹಯೋಗದಿಂದ ಆರ್ಯ ವೈಶ್ಯ ಆಹಾರ ವಾಹಿನಿ/ವಾಹಿನಿ ಯೋಜನೆ ಹಾಗೂ ವಾಸವಿ ಜಲಶಕ್ತಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ' ಎಂದು ಮಾಹಿತಿ ನೀಡಿದರು.
"ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ನಿಗಮದಲ್ಲಿ ಸಾಲ ಪಡೆದು ಸಕಾಲದಲ್ಲಿ ಸಾಲ ತೀರಿಸಿದಂತಹ ಫಲಾನುಭವಿಗಳಿಗೆ ಪುನಃ ಸಾಲ ನೀಡಿ ಸಣ್ಣ ಉದ್ಯಮಿಗಳಿಗೆ ಉತ್ತೇಜನ ನೀಡಿರುವ ಏಕೈಕ ನಿಗಮ ಆರ್ಯವೈಶ್ಯ ನಿಗಮವಾಗಿದೆ. ಈ ಮೂಲಕ ನುರಿತ ಉದ್ಯಮಿಗಳಿಗೆ ಸಹಾಯ ಹಸ್ತ ಚಾಚುವ ಗಮನಾರ್ಹ ಕೆಲಸಕ್ಕೆ ನಿಗಮವು ಮುಂದಾಗಿದೆ" ಎಂದು ಸಂತಸ ವ್ಯಕ್ತಪಡಿಸಿದರು.
ಈ ಯೋಜನೆಯಲ್ಲಿ ಫಲಾನುಭವಿಗಳಿಗೆ ತಲಾ ರೂ.20,000/-ಸಹಾಯಧನ ಹಾಗೂ ರೂ.80,000/-ಸಾಲ ಬಿಡುಗಡೆ ಮಾಡಿದ್ದು, ಫಲಾನುಭವಿಯು ಸಾಲವನ್ನು ಶೇ.4 ರಷ್ಟು ಬಡ್ಡಿ ದರದಲ್ಲಿ ಮರುಪಾವತಿಯನ್ನು ಯಾವುದೇ ಶುಲ್ಕವಿಲ್ಲದೇ https://kacdc.karnataka.gov.in/ ನಲ್ಲಿ ವೆಬ್ಆಪ್ನ ಮೂಲಕ ಮರುಪಾವತಿಸಲು ಅವಕಾಶವಿರುತ್ತದೆ. ಸಾಲ ಪಡೆದಂತಹ ಎಲ್ಲಾ ಫಲಾನುಭವಿಗಳು ಸಾಲವನ್ನು ಸದುಪಯೋಗ ಪಡಿಸಿಕೊಂಡು ಸಕಾಲದಲ್ಲಿ ಮರುಪಾವತಿ ಮಾಡಬೇಕೆಂದು ಮನವಿ ಮಾಡಿದರು. ಅಲ್ಲದೆ, ಇಲ್ಲಿಯವರೆಗೂ ನಿಗಮಕ್ಕೆ ರೂ.6.00 ಕೋಟಿ ಮರುಪಾವತಿ ಮೊತ್ತ ಸ್ವೀಕೃತಿಯಾಗಿದ್ದು, ಎಲ್ಲಾ ಫಲಾನುಭವಿಗಳಿಗೆ ಧನ್ಯವಾದಗಳನ್ನು ಸಲ್ಲಿಸಿದರು.
ಆರ್ಯ ವೈಶ್ಯ ನಿಗಮವು ಇಲ್ಲಿಯವರೆಗೂ ಆರ್ಯ ವೈಶ್ಯ ಜನಾಂಗದವರ ಏಳಿಗೆಗಾಗಿ ನೂತನ ಯೋಜನೆಗಳ ಮೂಲಕ ಸಮುದಾಯದವರಿಗೆ ಸಾಲ-ಸಹಾಯಧನವನ್ನು ನೀಡುತ್ತಾ ನೆರವಾಗಿದ್ದು, ಆರ್ಯ ವೈಶ್ಯ ಸಮುದಾಯದವರ ಸರ್ವತೋಮುಖ ಅಭಿವೃದ್ಧಿಗಾಗಿ ಮಾನ್ಯ ಮುಖ್ಯಮಂತ್ರಿ ಅವರಿಗೆ ನಿಗಮಕ್ಕೆ 2025-26ನೇ ಸಾಲಿಗೆ ರೂ.25.00 ಕೋಟಿ ಅನುದಾನವನ್ನು ಒದಗಿಸಲು ಬೇಡಿಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ ಮಾತನಾಡಿ, "ನಿಗಮವು ಸಂಪೂರ್ಣವಾಗಿ ಗಣಕೀಕರಣಗೊಂಡಿರುವುದರಿಂದ ಸಕಾಲದಲ್ಲಿ ಎಲ್ಲಾ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮಾಡಲು ಸಾಧ್ಯವಾಗಿರುವುದು ಪ್ರಶಂಸನೀಯ" ಎಂದು ಅವರು ಮೆಚ್ಚುಗೆ ಸೂಚಿಸಿದರು.
ನಿಗಮದ ವ್ಯವಸ್ಥಾಪಕ ನಿರ್ದೇಶಕಿಯಾದ ಶ್ರೀಮತಿ ದೀಪಶ್ರೀ.ಕೆ ಅವರು ಮಾತನಾಡಿ, "ನಿಗಮದ ಇತರೆ ಯೋಜನೆಗಳಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಶೀಘ್ರದಲ್ಲಿಯೇ ಡಿ.ಬಿ.ಟಿ ಮಾಡಲಾಗುವುದೆಂದು" ತಿಳಿಸಿದರು.
ಸ್ವಯಂ ಉದ್ಯೋಗ ನೇರ ಸಾಲ ಯೋಜನೆ, ಅರಿವು ಶೈಕ್ಷಣಿಕ ಸಾಲ ಯೋಜನೆ, ಬ್ಯಾಂಕ್ಗಳ ಸಹಯೋಗದೊಂದಿಗೆ ಆರ್ಯ ವೈಶ್ಯ ಆಹಾರ ವಾಹಿನಿ/ವಾಹಿನಿ ಯೋಜನೆ, ವಾಸವಿ ಜಲಶಕ್ತಿ ಯೋಜನೆ ನಿಗಮದ ಅಡಿಯಲ್ಲಿ ಸಮಾಜದ ಜನರಿಗೆ ಸಹಾಯ ಹಸ್ತ ಚಾಚುತ್ತಿರುವ ಪ್ರಮುಖ ಯೋಜನೆಗಳಾಗಿವೆ.
ಹೊಸ ಉದ್ಯಮಿಗಳಿಗೆ ವಾರ್ಷಿಕ 4ರ ಬಡ್ಡಿ ದರದಲ್ಲಿ ಸಾಲ-ಸೌಲಭ್ಯ, ನಿಗಮದಿಂದ 1 ಲಕ್ಷದ ವರೆಗೆ ಸಾಲ-ಸಹಾಯಧನ ಯೋಜನೆಯಡಿ 20,000 ಗಳವರೆಗೆ ಸಬ್ಸಿಡಿ, 500 ಫಲಾನುಭವಿಗಳಿಗೆ 5 ಕೋಟಿ ರೂ. ಗಳಷ್ಟು ಹಣ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ.
ನಿಗಮದ ವಿವಿಧ ಯೋಜನೆಗಳು:
ಸ್ವಯಂ ಉದ್ಯೋಗ ನೇರ ಸಾಲ ಯೋಜನೆ - ಸ್ವಯಂ-ಉದ್ಯೋಗ ನೇರಸಾಲ ಯೋಜನೆಯಲ್ಲಿ ವ್ಯಾಪಾರ ಕೈಗೊಳ್ಳಲು ನಿಗಮದಿಂದ ಒಂದು ಲಕ್ಷ ಸಾಲ-ಸಹಾಯಧನ ನೀಡಲಾಗುವುದು. ಇದರಲ್ಲಿ ಇಪ್ಪತ್ತು ಸಾವಿರ ಸಹಾಯಧನ ಹಾಗೂ ಎಂಬತ್ತು ಸಾವಿರ ಸಾಲವನ್ನು ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ನೀಡಲಾಗುವುದು. ಅರ್ಜಿದಾರರ ವಾರ್ಷಿಕ ಆದಾಯ ಮೂರು ಲಕ್ಷಮಿತಿ ಒಳಗಿರಬೇಕು. 18 ವರ್ಷ ಮೇಲ್ಪಟ್ಟು 55 ವರ್ಷದೊಳಗಿನವರಾಗಿರಬೇಕು. ಪಡೆದ ಸಾಲವನ್ನು 3 ವರ್ಷಗಳಲ್ಲಿ ಮರುಪಾವತಿಮಾಡಬೇಕು. ಈಗಾಗಲೇ ಸಾಲ ಪಡೆದು ಸಕಾಲದಲ್ಲಿ ಮರುಪಾವತಿ ಮಾಡಿದ ಫಲಾನುಭವಿಗಳಿಗೆ ಪುನಃ ಸಾಲ-ಸಹಾಯಧನ ಪಡೆಯಲು ಅವಕಾಶವಿರುತ್ತದೆ.
ಅರಿವು ಶೈಕ್ಷಣಿಕ ಸಾಲ ಯೋಜನೆ (ಕೌನ್ಸಿಲಿಂಗ್ ನಂತರ ಅರ್ಜಿ ಆಹ್ವಾನ)- ಅರಿವು ಶೈಕ್ಷಣಿಕ ಸಾಲ ಯೋಜನೆಯಲ್ಲಿ ಸಿ.ಇ.ಟಿ. ಅಥವಾ ನೀಟ್ ಪ್ರವೇಶ ಪಡೆದ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಒಂದು ವರ್ಷಕ್ಕೆ ಒಂದು ಲಕ್ಷ ಶೇ.2ರ ಬಡ್ಡಿದರದಲ್ಲಿ ಸಾಲ ನೀಡಲಾಗುವುದು. ಅರ್ಜಿದಾರರ ವಾರ್ಷಿಕ ಆದಾಯ ಆರು ಲಕ್ಷ ಮಿತಿ ಒಳಗಿರಬೇಕು. 18 ವರ್ಷ ಮೇಲ್ಪಟ್ಟು 35 ವರ್ಷದೊಳಗಿರಬೇಕು. ಒಂದು ಕುಟುಂಬದಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಅವಕಾಶವಿರುತ್ತದೆ. ವಿದ್ಯಾರ್ಥಿಯ ವ್ಯಾಸಂಗ ಪೂರ್ಣಗೊಂಡ 4 ತಿಂಗಳ ನಂತರ ಪಡೆದ ಸಾಲವನ್ನು 3 ವರ್ಷಗಳ ಅವಧಿಯಲ್ಲಿ ಮರುಪಾವತಿಸಬೇಕು.
ಬ್ಯಾಂಕ್ಗಳ ಸಹಯೋಗದೊಂದಿಗೆ ಆರ್ಯ ವೈಶ್ಯ ಆಹಾರ ವಾಹಿನಿ/ ವಾಹಿನಿ ಯೋಜನೆ - ಈ ಯೋಜನೆಯಡಿಯಲ್ಲಿ ಚಾಟ್ಸ್, ಹುರಿದ ತಿನಿಸುಗಳು, ಜ್ಯೂಸ್/ ಕಾಫಿ-ಟೀ ಇತ್ಯಾದಿಗಳನ್ನು ಮೊಬೈಲ್ ಕ್ಯಾಂಟೀನ್ನಲ್ಲಿ ವ್ಯಾಪಾರ ಮಾಡಲು ನಿಗಮದಿಂದ ಆರ್ಯ ವೈಶ್ಯ ಆಹಾರ ವಾಹಿನಿಗಾಗಿ ರೂ.2.00ಲಕ್ಷ ಸಹಾಯಧನ ನೀಡಲಾಗುವುದು. ವಾಹನವನ್ನು ವಾಣಿಜ್ಯ ಉಪಯೋಗಕ್ಕಾಗಿ ಬಳಸಿದ್ದಲ್ಲಿ ರೂ.1.00 ಲಕ್ಷಗಳ ಸಹಾಯಾನುಧಾನವನ್ನು ಮಾತ್ರ ಬಿಡುಗಡೆ ಮಾಡಲಾಗುವುದು. ಅರ್ಜಿದಾರರ ವಾರ್ಷಿಕ ಆದಾಯ 6.00 ಲಕ್ಷ ಮಿತಿ ಒಳಗಿರಬೇಕು. 21 ವರ್ಷ ಮೇಲ್ಪಟ್ಟು 55 ವರ್ಷ ಒಳಗಿನವರಾಗಿರಬೇಕು. ಅಭ್ಯರ್ಥಿಯು ಹೊಸ ವಾಹನ ಖರೀದಿಸಬೇಕು ಹಾಗೂ Food grade steel ಬಳಸಬೇಕು. ಅಭ್ಯರ್ಥಿ Franchise ಪಡೆಯಲು ಸಹ ಅವಕಾಶವಿರುತ್ತದೆ. ನಿಗಮದಿಂದ ಉಚಿತ ಮಾರ್ಕೆಟಿಂಗ್ ತರಬೇತಿ ನೀಡಲಾಗುವುದು.
ವಾಸವಿ ಜಲಶಕ್ತಿ ಯೋಜನೆ - ವಾಸವಿ ಜಲಶಕ್ತಿ ಯೋಜನೆಯಡಿಯಲ್ಲಿ ರೈತರ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸಲು ಶೇ.4 ರ ಬಡ್ಡಿ ದರದಲ್ಲಿ ಎರಡು ಲಕ್ಷ ಸಾಲ ಹಾಗೂ ವಿದ್ಯುದ್ದೀಕರಣಕ್ಕೆ ಐವತ್ತು ಸಾವಿರ ಸಹಾಯಧನ ನೀಡಲಾಗುವುದು. ಅರ್ಜಿದಾರರ ವಾರ್ಷಿಕ ಆದಾಯ 6.00 ಲಕ್ಷ ಮಿತಿ ಒಳಗಿರಬೇಕು. 21 ವರ್ಷ ಮೇಲ್ಪಟ್ಟು 55 ವರ್ಷ ಒಳಗಿನವರಾಗಿರಬೇಕು. ಅರ್ಜಿದಾರರು ಒಂದೇ ಸ್ಥಳದಲ್ಲಿ 2 ರಿಂದ 15 ಎಕರೆ ಜಮೀನು ಹೊಂದಿರಬೇಕು. ಸಾಲ ಪಡೆಯಲು ಯಾವುದೇ Collateral security ಇರುವುದಿಲ್ಲ. FRUITS (Farmers Registration and unified Beneficiary information system) ಅಭ್ಯರ್ಥಿಯು ಕಡ್ಡಾಯವಾಗಿ FRUITS ಐ.ಡಿಯನ್ನು ರೈತ ಮಿತ್ರ ಕೇಂದ್ರಗಳಲ್ಲಿ ಪಡೆದುಕೊಂಡಿರಬೇಕು.
Publisher: ಕನ್ನಡ ನಾಡು | Kannada Naadu