ಕನ್ನಡ ನಾಡು | Kannada Naadu

ರಕ್ಷಣಾ ಉತ್ಪನ್ನಗಳನ್ನು ನಮ್ಮ ದೇಶದಲ್ಲಿ ಉತ್ಪಾದನೆ ಮಾಡುವುದರೊಂದಿಗೆ ಹೊಸ ಮೈಲಿಗಲ್ಲನ್ನೇ ಸೃಷ್ಟಿಸಿದ್ದೇವೆ – ರಕ್ಷಣಾ ಸಚಿವ ರಾಜನಾಥ್ ಸಿಂಗ್

13 Feb, 2025

ಬೆಂಗಳೂರು  : ರಕ್ಷಣಾ ಉತ್ಪನ್ನಗಳನ್ನು ದೇಶೀಯವಾಗಿ ನಾವೇ ಉತ್ಪಾದನೆ ಮಾಡುತ್ತಿದ್ದು, ಹೊಸ ಮೈಲಿಗಲ್ಲನ್ನೇ ಸೃಷ್ಟಿಸಿದ್ದೇವೆ ಎಂದು ಕೇಂದ್ರ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ತಿಳಿಸಿದರು.

ಇಂದು ಯಲಹಂಕದ ವಾಯು ನೆಲೆಯಲ್ಲಿ ಆಯೋಜಿಸಿದ್ದ ಏರೋ ಇಂಡಿಯಾ – 2025ರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ರಕ್ಷಣಾ ಸಚಿವರು, ಒಂದು ದಶಕದ ಹಿಂದೆ ಶೇಕಡ 65-70 ರಷ್ಟು ರಕ್ಷಣಾ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿದ್ದು, ಈಗ ನಾವೇ ಶೇಕಡ 65-70 ರಷ್ಟು ಉತ್ಪನ್ನಗಳನ್ನು ದೇಶೀಯವಾಗಿ ಉತ್ಪಾದಿಸುತ್ತಿದ್ದೇವೆ. ಪ್ರಧಾನಿಗಳ ಆತ್ಮನಿರ್ಭರ ಪರಿಕಲ್ಪನೆಯನ್ನು ಸಾಕಾರಗೊಳಿಸಿದ್ದೇವೆ ಎಂದು ತಿಳಿಸಿದರು.

ಸ್ಪೂರ್ತಿ ನೀಡಿದ ಏರೋ ಇಂಡಿಯಾ  - 2025:
ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾದ ಏರೋ ಇಂಡಿಯಾ - 2025 ಅಗಾಧ ಶಕ್ತಿ ಹಾಗೂ ಸ್ಫೂರ್ತಿಯನ್ನು ತಂದಿದೆ. ಇದರಿಂದ ಉದ್ದಿಮೆಗಳು, ಸ್ಟಾರ್ಟ್ ಆಪ್ ಕಂಪನಿಗಳು ಮುಂತಾದವುಗಳಿಗೆ ಪ್ರೋತ್ಸಾಹ ದೊರೆತಂತಾಗಿದೆ ಎಂದರು.

ರಕ್ಷಣಾ ಉತ್ಪನ್ನಗಳನ್ನು ಇದೀಗ ವಿದೇಶಗಳಿಗೂ ರಫ್ತು ಮಾಡಲಾಗುತ್ತಿದೆ. ಈ ವಲಯದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ನಾವು ಇನ್ನೂ ಹೆಚ್ಚು ಸಾಧನೆ ಮಾಡಬೇಕಿದೆ. ಹೆಚ್ಚು ಜನ ಭಾಗೀದಾರರನ್ನು ಆಕಷಿಸುವಂತೆ ನಾವು ಮುನ್ನಡೆಯಬೇಕು. ದೇಶದಲ್ಲಿ ತಮ್ಮ ಜೀವದ ಹಂಗನ್ನು ತೊರೆದು ದೇಶ ಕಾಯುವ ಸೈನಿಕರನ್ನು ನಾವು ಸಶಕ್ತಿಕರಣಗೊಳಿಸಬೇಕು ಎಂದು ತಿಳಿಸಿದರು.

ಏರೋ ಇಂಡಿಯಾ – 2025  ಹಲವು ಕಂಪನಿಗಳು, ಪ್ರಮುಖ ಸಂಸ್ಥೆಗಳು, ಕೈಗಾರಿಕೆಗಳನ್ನು ಒಗ್ಗೂಡಿಸುವ ಪ್ರಯತ್ನ ಮಾಡಿದೆ. ವಿವಿಧ ರಕ್ಷಣಾ ಸಚಿವರ, ವಿವಿಧ ಕಂಪನಿ ಮುಖ್ಯಸ್ಥರ ಸಮಾವೇಶಗಳು ಇದಕ್ಕೆ ಹೊಸ ಆಯಾಮ ನೀಡಿದೆ. ಆದರೂ ನಾವು ಮಾಡಬೇಕಾದ ಕೆಲಸ ಬಹಳಷ್ಟಿದೆ. ಇಲ್ಲಿ ಹಲವು ದೇಶಗಳು, ಪ್ರದರ್ಶಕರು, ಗಣ್ಯರುಗಳು ಭಾಗವಹಿಸಿ ಸಮಾವೇಶಕ್ಕೆ ಮೆರಗು ನೀಡಿದ್ದಾರೆ. ಇದರಿಂದ ನಮ್ಮ ಸಾಮರ್ಥ್ಯವನ್ನು ದೇಶ ವಿದೇಶಗಳ ಎದರು ತೋರಿಸಿದಂತಾಗಿದೆ. ಇದರಿಂದ ನಾವು ಜಾಗತೀಕ ನಾಯಕ ಪಟ್ಟ ಏರುವುದರಲ್ಲಿ ಸಂಶಯವಿಲ್ಲ ಎಂದರು.

ಏರೋ ಇಂಡಿಯಾ  - 2025 ರಲ್ಲಿ ಪ್ರದರ್ಶನ ನೀಡಿದ ವೈಮಾನಿಕ ವಿಮಾನಗಳು ಎಲ್ಲರ ಕಣ್ಮನ ಸೆಳೆದವು. ವೈಯಕ್ತಿವಾಗಿ ನನಗೆ ಬಹಳ ಹುರುಪು ನೀಡಿದೆ. ಇಸ್ರೋ, ಹೆಚ್.ಎ.ಎಲ್, ಡಿ.ಆರ್.ಡಿ.ಓ ಮುಂತಾದ ಸಂಸ್ಥೆಗಳ ಸಹಕಾರದಿಂದ ನಾವು ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುತ್ತೇವೆ ಎಂಬುವುದರಲ್ಲಿ ಸಂಶವಿಲ್ಲ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಇಲಾಖೆಯ ರಾಜ್ಯ ಮಂತ್ರಿಗಳಾದ ಸಂಜಯ್ ಸೇಠ್, ಕೇಂದ್ರ ರಕ್ಷಣಾ ಇಲಾಖೆ (ಉತ್ಪಾದನೆ) ಕಾರ್ಯದರ್ಶಿಗಳಾದ ಸಂಜೀವ್ ಕುಮಾರ್, ನೌಕಪಡೆ ಮುಖ್ಯಸ್ಥರಾದ ಅಡ್ಮೀರಲ್ ದಿನೇಶ್ ಕೆ. ತ್ರಿಪಾತಿ, ರಕ್ಷಣಾ ಪಡೆಗಳ ಮುಖ್ಯಸ್ಥರಾದ ಜನರಲ್ ಅನಿಲ್ ಚವ್ಹಾಣ, ಸೇನಾ ಸಿಬ್ಬಂದಿ ಮುಖ್ಯಸ್ಥರಾದ ಉಪೇಂದ್ರ ದ್ವಿವೇದಿ, ಕರ್ನಾಟಕ ಸರ್ಕಾರ ಮೂಲಸೌಕರ್ಯ ಅಭಿವೃದ್ಧಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಕಾರ್ಯದರ್ಶಿಗಳಾದ ಎನ್. ಮಂಜುಳ ಸೇರಿದಂತೆ ರಕ್ಷಣ ಪಡೆ, ನೌಕಪಡೆ, ವಾಯುಪಡೆಯ ಅಧಿಕಾರಿಗಳು, ವಿವಿಧ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.  

Publisher: ಕನ್ನಡ ನಾಡು | Kannada Naadu

Login to Give your comment
Powered by