ಬೆಂಗಳೂರು : ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯ್ದೆಯ ಅನುಸಾರ ರಾಜ್ಯದ ಯಾವುದೇ ಅಂಗಡಿ ಮುಂಗಟ್ಟುಗಳು ತಮ್ಮ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡಕ್ಕೆ ಆದ್ಯತೆ ನೀಡಬೇಕಿದ್ದು, ನಿಯಮ ಪಾಲಿಸದ ವಾಣಿಜ್ಯ ಸಂಸ್ಥೆಗಳ ಪರವಾನಗಿ ನವೀಕರಿಸುವ ಸಂದರ್ಭದಲ್ಲಿ ಇದನ್ನು ಕಡ್ಡಾಯವಾಗಿ ಪರಿಶೀಲಿಸಿಯೇ ನವೀಕರಣಕ್ಕೆ ಕ್ರಮ ವಹಿಸಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸೂಚನೆ ನೀಡಿದ್ದಾರೆ.
ಶುಕ್ರವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಕನ್ನಡ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರದ ಆಶಯವನ್ನು ಅನುಷ್ಠಾನಗೊಳಿಸುವಲ್ಲಿ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ ಎಂದರು.
ಕನ್ನಡ ಕಲಿಕಾ ಕೇಂದ್ರಕ್ಕೆ ಬಿಬಿಎಂಪಿ ಸಹಯೋಗ
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರಿನಲ್ಲಿ 19 ಸ್ಥಳಗಳಲ್ಲಿ ಕನ್ನಡೇತರರಿಗೆ ಕನ್ನಡವನ್ನು ಕಲಿಸುವ ತರಗತಿಗಳನ್ನು ನಡೆಸುತ್ತಿದ್ದು, ಇದರ ಫಲಿತಾಂಶ ಆಶದಾಯಕವಾಗಿದೆ ಎಂದ ಡಾ.ಬಿಳಿಮಲೆ, ಕನ್ನಡೇತರರು ಇರುವ ಪ್ರದೇಶಗಳಲ್ಲಿ ಕನ್ನಡ ಕಲಿಕಾ ಕೇಂದ್ರಗಳ ಸಂಖ್ಯೆಯ ಹೆಚ್ಚಳಕ್ಕೆ ಬಿಬಿಎಂಪಿ ಮುಂದಾಗಬೇಕೆಂದು ಸೂಚಿಸಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಈ ಕುರಿತಂತೆ ವಿಶೇಷ ಪಠ್ಯಕ್ರಮವನ್ನು ಸಿದ್ಧಪಡಿಸಿದ್ದು, ಬಿಬಿಎಂಪಿ ಇದನ್ನು ಅಳವಡಿಸಿಕೊಳ್ಳಬಹುದಾಗಿದೆ. ಬಿಬಿಎಂಪಿ ಗುರುತಿಸುವ ಕನ್ನಡ ಶಿಕ್ಷಕರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ತರಬೇತಿಯನ್ನು ನೀಡಲು ಸಿದ್ಧವಿದೆ. ಬೆಂಗಳೂರಿನ ಬಹುಭಾಷಾ ಪರಿಸರವನ್ನು ಉಳಿಸಿಕೊಂಡೇ ಕನ್ನಡವನ್ನು ಮುನ್ನೆಲೆಗೆ ತರಬೇಕಾದ ಅವಶ್ಯಕತೆ ಇದೆ ಎಂದರು.
ಪಾಲಿಕೆ ವ್ಯಾಪ್ತಿಯ ಶಾಲೆಗಳ ಆಸ್ತಿ ಸಂರಕ್ಷಣೆಗೆ ಕ್ರಮ
ಬಿಬಿಎಂಪಿ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಆಸ್ತಿ ಸಂರಕ್ಷಣೆಗೆ ಕೂಡಲೇ ಪಾಲಿಕೆ ಮುಂದಾಗಬೇಕೆಂಬ ವಿಷಯವನ್ನು ಒತ್ತಿ ಹೇಳಿದ ಡಾ.ಬಿಳಿಮಲೆ, ಸರ್ಕಾರಿ ಕನ್ನಡ ಶಾಲೆಗಳು ಉಳಿದಲ್ಲಿ ಮಾತ್ರ ಕನ್ನಡ ಉಳಿಯುವ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದರು.
ಗ್ರೇಟರ್ ಬೆಂಗಳೂರು
ಗ್ರೇಟರ್ ಬೆಂಗಳೂರು ಯೋಜನೆಯಡಿಯಲ್ಲಿ ಮುಂದಿನ ದಿನಗಳಲ್ಲಿ ಹತ್ತಾರು ಪಾಲಿಕೆಗಳು ಸೃಜನೆಯಾಗುವ ಸಾಧ್ಯತೆಗಳು ದಟ್ಟವಾಗಿದ್ದು, ಅಂದು ಎದುರಾಗಬಹುದಾದ ಕನ್ನಡದ ಸವಾಲುಗಳನ್ನು ಈಗಲೇ ಪಾಲಿಕೆ ಅಂದಾಜು ಮಾಡಬೇಕಿದೆ ಎಂದ ಡಾ.ಬಿಳಿಮಲೆ, ಈ ಪಾಲಿಕೆಗಳಿಗೆ ಮಹಾಪೌರರ ಆಯ್ಕೆ ಸಂದರ್ಭದಲ್ಲಿ ಮೂಲ ಕನ್ನಡಿಗರಿಗೆ ಮಾತ್ರ ಅವಕಾಶವಿರುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕೆಂದು ಸೂಚಿಸಿದರು.
ವಲಯ ಕಚೇರಿಗಳಲ್ಲಿ ಕನ್ನಡ ಘಟಕ
ಬಿಬಿಎಂಪಿ ಕೇಂದ್ರ ಕಚೇರಿ ಸೇರಿದಂತೆ ಬೆಂಗಳೂರಿನ ಪ್ರತಿಯೊಂದು ವಲಯ ಕಚೇರಿಗಳಲ್ಲಿ ಕನ್ನಡ ಘಟಕವನ್ನು ತೆರೆದು ಅದಕ್ಕೆ ಒಬ್ಬ ನೊಡಲ್ ಅಧಿಕಾರಿಯನ್ನು ಮತ್ತು ಸಿಬ್ಬಂದಿಯನ್ನು ನೇಮಿಸಬೇಕೆಂದು ಆಗ್ರಹಿಸಿ ಡಾ.ಬಿಳಿಮಲೆ, ಈ ಘಟಕಗಳು ಪಾಲಿಕೆಯ ಕನ್ನಡ ಮತ್ತು ಸಂಸ್ಕೃತಿ ಕಾರ್ಯಕ್ರಮಗಳ ಜವಾಬ್ದಾರಿಯನ್ನು ನಿರ್ವಹಿಸಬೇಕೆಂದರು. ಬಿಬಿಎಂಪಿ ಮುಖ್ಯ ಆಯುಕ್ತರು ಕನ್ನಡ ಘಟಕಗಳ ಸ್ಥಾಪನೆಗೆ ಸ್ಥಳದಲ್ಲಿಯೇ ಒಪ್ಪಿಗೆ ನೀಡಿದರು.
ಪಾಲಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಲವಾರು ಹಿರಿಯ ಅಧಿಕಾರಿಗಳು ಕನ್ನಡದಲ್ಲಿ ಟಿಪ್ಪಣಿಯನ್ನು ಮಂಡಿಸುತ್ತಿಲ್ಲವೆಂಬ ದೂರುಗಳು ಪ್ರಾಧಿಕಾರಕ್ಕೆ ಸ್ವೀಕೃತವಾಗಿದ್ದು, ಈ ಬಗ್ಗೆ ಮುಖ್ಯ ಆಯುಕ್ತರು ಕೂಡಲೇ ಅಗತ್ಯ ನಿರ್ದೇಶನ ಹೊರಡಿಸಬೇಕೆಂದು ಸೂಚಿಸಿದರು.
ಪಾಲಿಕೆಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ವಿಶೇಷ ಆಯುಕ್ತರಾದ ಮುನಿಷ್ ಮೊದ್ಗಿಲ್, ಅವಿನಾಶ್ ಮೆನನ್, ಹರಿಶ್ ಕುಮಾರ್, ವಿಕಾಸ್ ಕೆ.ಎಸ್. ಎಲ್ಲವಲಯಗಳ ವಿಶೇಷ ಆಯುಕ್ತರು, ಆರೋಗ್ಯ ಕಲ್ಯಾಣ, ಕಂದಾಯ ಸೇರಿದಂತೆ ಎಲ್ಲ ಹಿರಿಯ ಅಧಿಕಾರಿಗಳು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಾಮ ನಿರ್ದೇಶಿತ ಸದಸ್ಯರಾದ ಡಾ.ವಿ.ಪಿ.ನಿರಂಜನರಾಧ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯವರಾದ ಡಾ.ಸಂತೋಷ ಹಾನಗಲ್ಲ, ಅಧ್ಯಕ್ಷರ ಆಪ್ತ ಕಾರ್ಯದರ್ಶಿಯವರಾದ ಟಿ.ಎಸ್.ಫಣಿಕುಮಾರ್, ಕನ್ನಡ ಪರ ಹಿರಿಯ ಹೋರಾಟಗಾರರಾದ ಸಿದ್ದಯ್ಯ ಮತ್ತಿತರರು ಹಾಜರಿದ್ದರು.
Publisher: ಕನ್ನಡ ನಾಡು | Kannada Naadu