ಕನ್ನಡ ನಾಡು | Kannada Naadu

ಪಂಚತಂತ್ರ ಕೇವಲ ಕಥೆಗಳಲ್ಲ, ಜೀವನ ಮೌಲ್ಯದ ಪಾಠಗಳು ಎಂದ  ಡಾ. ವಿ.ಬಿ. ಆರತಿ

22 Oct, 2024

ಬೆಂಗಳೂರು : ಪಂಚತಂತ್ರದ ಕಥೆಗಳು ಕೇವಲ ಕಥೆಗಳಲ್ಲ ಬದಲಿಗೆ ಅವು ಜೀವನ ಮೌಲ್ಯಗಳು. ಅವುಗಳನ್ನು ಜೀವನಕ್ಕೆ ಅನ್ವಯ ಮಾಡಿಕೊಂಡರೆ ಅನೇಕ  ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ. ಜೀವನದಲ್ಲಿ ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು, ಎಲ್ಲಿ ಹೇಗಿರಬೇಕು ಎಂಬ ಪ್ರಜ್ಞೆ ಬೆಳೆಯುತ್ತದೆ ಎಂದು ವಿಭು ಅಕಾಡೆಮಿ ಸಂಸ್ಥಾಪಕಿ ಡಾ.ವಿ. ಬಿ. ಆರತಿ ಅವರು ಹೇಳಿದರು.

ಅವರು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಬೆಂಗಳೂರು ಮಹಾನಗರದಿಂದ ಆಯೋಜಿಸಿದ್ದ ಪ್ರೌಢಶಾಲಾ ಮಕ್ಕಳಿಗಾಗಿ ಪಂಚತಂತ್ರ ಕಥೆ ಹೇಳುವ ಸ್ಪರ್ಧೆಯ ವಿಜೇತರಿಗೆ ಬೆಂಗಳೂರಿನ ಎನ್. ಆರ್. ಕಾಲೋನಿಯ ಸಿ. ಅಶ್ವತ್ಥ್ ಕಲಾಭವನದಲ್ಲಿ ಆಯೋಜಿಸಿದ್ದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಇಂದು ನಾವು ಪಡೆಯುತ್ತಿರುವ ಶಿಕ್ಷಣ ಭಾರತೀಯ ಶಿಕ್ಷಣವಲ್ಲ. ಇದು ಮೆಕಾಲೆ ಪದ್ಧತಿಯ ಶಿಕ್ಷಣ. ಭಾರತೀಯರಲ್ಲಿ ಗುಲಾಮಿ ಮನಃಸ್ಥಿತಿಯನ್ನು ನಿರ್ಮಿಸುವ ಉದ್ದೇಶದಿಂದ ಮೆಕಾಲೆ ಶಿಕ್ಷಣ ಪದ್ಧತಿ ಜಾರಿಗೆ ಬಂದಿತು. ಭಾರತೀಯ ಶಿಕ್ಷಣ ಮರೆಯಾಯಿತು. ಭಾರತಕ್ಕೆ ಸ್ವಾತಂತ್ರ‍್ಯ ಬಂದು ಇಷ್ಟು ವರ್ಷಗಳಾದರೂ
ನಾವು ಇದರಿಂದ ಹೊರಬಂದಿಲ್ಲ. ನಮ್ಮಲ್ಲಿ ಶಿಕ್ಷಣ ಕಥೆಯಿಂದಲೇ ಆರಂಭವಾಗಿ ಕಥೆಯಿಂದಲೇ ಮುಕ್ತಾಯವಾಗುತ್ತಿತ್ತು. ವೇದ, ಮಹಾಭಾರತ, ರಾಮಾಯಣ,
ಪಂಚತಂತ್ರ ಕಥೆಗಳ ಮೂಲಕ ರಾಜನೀತಿ, ಸಾಮಾಜಿಕ ನೀತಿ, ಸಾಮಾಜಿಕ ಪ್ರಜ್ಞೆಗಳನ್ನು ಬೆಳೆಸಲಾಗುತ್ತಿತ್ತು. ಮರೆಯಾಗಿರುವ ಈ ಶಿಕ್ಷಣ ಕ್ರಮವನ್ನು ಮತ್ತೆ ಅಳವಡಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
  ʻವಸುಧೈವ ಕುಟುಂಬಕಮ್ʼ ಎಂಬುದು ಪಂಚತಂತ್ರಲ್ಲಿ ನರಿ ಹೇಳುವ ಮಾತು. ತನ್ನ ಎದುರಿನ ಪ್ರಾಣಿಯನ್ನು ಮೋಸಗೊಳಿಸಲು ಕುಟಿಲತೆಯಿಂದ ಅದು ಆ
ಮಾತನ್ನು ಹೇಳುತ್ತದೆ. ಆದರೆ ಆ ಸಂದರ್ಭವನ್ನು ಅರ್ಥ ಮಾಡಿಕೊಳ್ಳದೆ ಇಡೀ ಜಗತ್ತೇ ಒಂದು ಕುಟುಂಬ ಎಂದು ನಂಬಿ ಮೋಸ ಹೋಗುತ್ತೇವೆ. ಕೇಂದ್ರ ಸರ್ಕಾರ ಕೂಡ ಅದನ್ನು ಘೋಷವಾಕ್ಯವೆಂದು ಪರಿಗಣಿಸಿದೆ. ಆದರೆ ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಎಂಬ ಸ್ವಂತ ಪ್ರಜ್ಞೆಯನ್ನು ನಮ್ಮ ವೇದ, ಉಪನಿಷತ್ತು, ಭಗವದ್ಗೀತೆಗಳು ತಿಳಿಸುತ್ತವೆ. ಅದನ್ನು ಅರ್ಥಮಾಡಿಕೊಳ್ಳಬೇಕಿದೆ ಎಂದರು.
  ನಾವಿಂದು ವಿಕಿಪೀಡಿಯಾವನ್ನು ನಂಬುತ್ತೇವೆ. ನಮ್ಮ ಅಜ್ಜಿ ತಾತರನ್ನು ನಂಬುವುದಿಲ್ಲ. ಬಾಲಿವುಡ್ ನಟ ನಟಿಯರ ಮಾತುಗಳನ್ನು, ಸಿನಿಮಾಗಳನ್ನು,
ಜಾಹೀರಾತುಗಳನ್ನು ನಂಬುತ್ತೇವೆ. ನಮ್ಮ ವೇದ ಪರಂಪರೆಯನ್ನು ನಂಬುವುದಿಲ್ಲ. ಇಂಗ್ಲಿಷ್‌ನಲ್ಲಿ ಹೇಳಿದ್ದೆಲ್ಲವೂ ಸತ್ಯ ಎಂದು ನಂಬುತ್ತೇವೆ. ಆದರೆ ನಮ್ಮ ಭಾಷೆ ಸಂಸ್ಕೃತಿಗಳನ್ನು ನಂಬಿ ಗೌರವಿಸುವುದಿಲ್ಲ. ಈ ಮನಃಸ್ಥಿತಿಯಿಂದ ಹೊರಬರಬೇಕಿದೆ ಎಂದು ಅಭಿಪ್ರಾಯಪಟ್ಟರು. ನಮ್ಮ ದೇಶದ ಸಂಸ್ಕೃತಿಗೆ ನಾವು ರಾಯಭಾರಿಗಳಾಗಬೇಕು. ನಮ್ಮತನವನ್ನು ನಾವು ಉಳಿಸಿಕೊಳ್ಳಬೇಕು. ಇಂದು ಸಣ್ಣ ಸಣ್ಣ ಕಾರಣಗಳಿಗಾಗಿ ಆತ್ಮಹತ್ಯೆ ಹೆಚ್ಚುತ್ತಿದೆ. ಯುವಜನರು ದುರ್ಬಲ ಮನಃಸ್ಥಿತಿಗೆ ಜಾರುತ್ತಿದ್ದಾರೆ. ದೈಹಿಕ ಬಲವೂ ಕುಂದುತ್ತಿದೆ. ಇವುಗಳಿಂದ ಹೊರಬಂದು ಶಕ್ತ ಸಮಾಜವನ್ನು, ದೇಶವನ್ನು ಕಟ್ಟಬೇಕು. ಪಂಚತಂತ್ರದಂಥ ಪ್ರಾಚೀನ ಗ್ರಂಥಗಳಲ್ಲಿ ವ್ಯಕ್ತಿನಿರ್ಮಾಣಕ್ಕೆ ಬೇಕಾದ ಮೌಲ್ಯಗಳಿವೆ. ವಿದ್ಯಾರ್ಥಿಗಳು ಕೇವಲ ಸ್ಪರ್ಧೆಗೆ ಪಂಚತಂತ್ರದ ಕಥೆಗಳನ್ನು ಸೀಮಿತಗೊಳಿಸದೆ ಅವನ್ನು ಜೀವನಕ್ಕೆ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
 
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಉದ್ಯಮಿ, ಜಸ್ಟ್ ಬುಕ್ಸ್ ಮಾಲೀಕ ಸುರೇಶ್ ನರಸಿಂಹ ಅವರು ಮಾತನಾಡಿ, ಶಿಕ್ಷಣ ಮತ್ತು ನಿಃಸ್ವಾರ್ಥ ಸೇವೆ ಇವೆರಡೂ ಉದ್ಯಮಿಯಲ್ಲಿರಬೇಕಾದ ಗುಣಗಳು. ಆದರೆ ಇಂದಿನ ಉದ್ಯಮಿಗಳಲ್ಲಿ ಮೌಲ್ಯಗಳು ಕುಸಿಯುತ್ತಿವೆ. ಮಕ್ಕಳಲ್ಲಿ ಮೌಲ್ಯಗಳು ಕಣ್ಮರೆಯಾಗುತ್ತಿವೆ. ಇದಕ್ಕೆ ಪೋಷಕರೇ ಹೊಣೆಗಾರರು. ಪೋಷಕರು ಎಲ್ಲಿಯವರೆಗೆ ಮಕ್ಕಳಿಗೆ ನಮ್ಮ ಧರ್ಮ, ಸಂಸ್ಕೃತಿ, ಭಾಷೆ, ಸಾಹಿತ್ಯಗಳ ಪರಿಚಯ ಮಾಡಿಕೊಡುವುದಿಲ್ಲವೋ ಅಲ್ಲಿಯವರೆಗೆ ಈ ಸಮಸ್ಯೆ ಪರಿಹಾರವಾಗುವುದಿಲ್ಲ. ಜೀವನದಲ್ಲಿ ಮುಖ್ಯವಾದದ್ದು ಕೇವಲ ಅಂಕಗಳಲ್ಲ; ಮೌಲ್ಯಗಳು ಎಂಬುದನ್ನು ಪೋಷಕರು ಅರ್ಥಮಾಡಿಕೊಳ್ಳಬೇಕು. ಆ ನಿಟ್ಟಿನಲ್ಲಿ ಮಕ್ಕಳನ್ನು ಬೆಳೆಸಬೇಕು ಎಂದರು. ಮಕ್ಕಳು ಪುಸ್ತಕಗಳನ್ನು ಓದುವ ಅಭ್ಯಾಸ ಮಾಡಿಕೊಳ್ಳಬೇಕು. ಓದುವ ಹವ್ಯಾಸದಿಂದ ಜ್ಞಾನ, ತಾಳ್ಮೆ, ಸಂಯಮಗಳು ವೃದ್ಧಿಯಾಗುವುದಲ್ಲದೆ, ದುರ್ಬಲ ಮನಃಸ್ಥಿತಿ ದೂರವಾಗುತ್ತದೆ. ಅಭಾಸಾಪ ಆಯೋಜಿಸಿದ ಈ ಸ್ಪರ್ಧೆಯ ಉದ್ದೇಶವೇ ಮಕ್ಕಳಲ್ಲಿ ಓದುವಿಕೆಯನ್ನು ಬೆಳೆಸುವುದು. ಮಕ್ಕಳು ಅದನ್ನು ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸಿದರು. ಅಭಾಸಾಪ ಬೆಂಗಳೂರು ದಕ್ಷಿಣ ಜಿಲ್ಲಾ ಅಧ್ಯಕ್ಷ ಡಾ. ಎ. ಭಾನು, ಹಿರಿಯ ಪತ್ರಕರ್ತ ಹಾಗೂ ಅಭಾಸಾಪ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಡಿ.ಎಂ. ಘನಶ್ಯಾಮ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಭಾಸಾಪ ಬೆಂಗಳೂರು ಮಹಾನಗರ ಸಂಯೋಜಕ ಚಂದ್ರಶೇಖರ್ ಮೈಸೂರು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಪರಿಚಯ ಮಾಡಿಕೊಟ್ಟರು. ಅಭಾಸಾಪ ರಾಜ್ಯ ಸಹ ಖಜಾಂಚಿ ಭ. ರಾ. ವಿಜಯ್ ಕುಮಾರ್ ಪಂಚತಂತ್ರ ಕಥೆ ಹೇಳುವ ಸ್ಪರ್ಧೆಯ
ಉದ್ದೇಶವನ್ನು ವಿವರಿಸಿದರು. ಅಭಾಸಾಪ ಬೆಂಗಳೂರು ಉತ್ತರ ಕಾರ್ಯದರ್ಶಿ ಸಚಿನ್ ಮುಂಗಿಲ ನಿರೂಪಿಸಿದರು. ಭಾವನಾ ಬಿ. ಪ್ರಾರ್ಥಿಸಿದರು. ಅಭಾಸಾಪ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ನವೀನ್ ಭಟ್ಟ ಗಂಗೋತ್ರಿ ಸ್ವಾಗತಿಸಿದರು. ಅಭಾಸಾಪ ಬೆಂಗಳೂರು ಮಹಾನಗರ ಕಾರ್ಯದರ್ಶಿ ರಮೇಶ ದೊಡ್ಡಪುರ ವಂದಿಸಿದರು.

Publisher: ಕನ್ನಡ ನಾಡು | Kannada Naadu

Login to Give your comment
Powered by