ಕನ್ನಡ ನಾಡು | Kannada Naadu

ಹೊರದೇಶಗಳಿಗೆ  ತೆರಳುವಿರಾ..?  ಆರ್.ಎನ್.ಐ. ಗೆ ಮಾಹಿತಿ ನೀಡಿ ಎಂದು  ಡಾ.ಆರತಿ ಕೃಷ್ಣ ಆಗ್ರಹ

17 Jul, 2024

ಬೆಂಗಳೂರು : ಉದ್ಯೋಗ, ಅಧ್ಯಯನದ ನಿಮಿತ್ತ, ವಿದೇಶಕ್ಕೆ ತೆರಳುವ ಮುನ್ನ ಸಾಕಷ್ಟು ಎಚ್ಚರಿಕೆ ವಹಿಸಬೇಕಿದೆ. ದೇಶ ಭಾಷೆ ಗೊತ್ತಿರದ ಜಾಗದಲ್ಲಿ ಏನೆಲ್ಲಾ ಕಷ್ಟಗಳನ್ನು ಎದುರಿಸುವ ಪ್ರಮೇಯ ಬರಬಹುದು ಎನ್ನುವುದು ಉಹಿಸಲು ಸಾಧ್ಯವಿಲ್ಲ. ಆದ್ದರಿಂದ  ಕರ್ನಾಟಕ ರಾಜ್ಯದಿಂದ ಹೊರದೇಶಗಳಲ್ಲಿ ಕೆಲಸವನ್ನರಸಿಯೋ ಅಥವಾ ಇತರ ಕಾರ್ಯಕ್ಕಾಗಿ ತೆರಳುವ ಮುನ್ನ ರಾಜ್ಯ ಸರಕಾರದ ʻಅನಿವಾಸಿ ಭಾರತೀಯ ಸಮಿತಿಗೆʼ ಮಾಹಿತಿ ನೀಡುವಂತೆ  ಸಮಿತಿಯ  ಉಪಾಧ್ಯಕ್ಷರಾದ ಡಾ. ಆರತಿ ಕೃಷ್ಣ ಅವರು ಆಗ್ರಹಿಸಿದ್ದಾರೆ.
 ಈ ಕುರಿತು ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಮಾತನಾಡಿ ಅನಧಿಕೃತ ಏಜೆನ್ಸಿಗಳ ಮೂಲಕ ಸೌದಿ ಅರೇಬಿಯಾದಲ್ಲಿ ಕೆಲಸಕ್ಕೆ ಸೇರಿ ವಂಚನೆಗೊಳಗಾದ ವ್ಯಕ್ತಿಯನ್ನು ಸದ್ಯ ರಕ್ಷಿಸಲಾಗಿದೆ. ಆದ್ದರಿಂದ ವಿದೇಶಕ್ಕೆ ಕಳಿಸುತ್ತೇವೆ ಎನ್ನುವ  ಏಜೆಂಟ್‍ರುಗಳ ನೈಜತೆಯ ಬಗ್ಗೆ ಸೂಕ್ಷ್ಮವಾಗಿ ಪರಿಶೀಲನೆ ಮಾಡದೆ ಅವರ ಮಾತಿಗೆ ಮರುಳಾಗಿ ಮೋಸ ಹೋಗದಂತೆ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಅಧಿಕೃತ ಎಜೆಂಟ್‍ಗಳ ಅಥವಾ ಸಂಬಂಧಿಸಿದ ಸರ್ಕಾರದ ಇಲಾಖೆಗಳ ಸಹಾಯವನ್ನು ಪಡೆಯುವಂತೆ ಸಾರ್ವಜನಿಕರಿಗೆ  ಸೂಚನೆ ನೀಡಿದ್ದಾರೆ.
ಸೌಧಿ ಅರೇಬಿಯಾದಲ್ಲಿ ಸಂಕಸ್ಟಕ್ಕೆ ಸಿಲುಕಿದ ರಾಮನಗರದ ಮೊಹಮ್ಮದ್ ಅಶ್ಪಾಕ್ ಎಂಬ ವ್ಯಕ್ತಿಯನ್ನು ಈಗಾಗಲೇ ರಕ್ಷಿಸಲಾಗಿದೆ. ಕಳೆದ ಹನ್ನೊಂದು ತಿಂಗಳ ಹಿಂದೆ ಬೆಂಗಳೂರಿನ ಶಿವಾಜಿನಗರದಲ್ಲಿರುವ ಮಹಮ್ಮದ್ ಪೀರ್ ಎಂಬ ಏಜೆಂಟ್ ಸೌದಿ ಅರೇಬಿಯಾದಲ್ಲಿರುವ ಅಮೇಜಾನ್ ಕಂಪೆನಿಯಲ್ಲಿ ಸಹಾಯಕ ಹುದ್ದೆಯ ಕೆಲಸ ಕೊಡಿಸುವುದಾಗಿ ನಂಬಿಸಿದ್ದ. ಅಲ್ಲಿಗೆ ಕೆಲಸಕ್ಕೆ ಕಳಿಸಲು ಮೊಹಮ್ಮದ್‌ ಅಶ್ಪಾಕ್‌ ಅವರಿಂದ ಬರೋಬ್ಬರಿ1 ರೂ. ಲಕ್ಷಗಳನ್ನು ಪಡೆದುಕೊಂಡಿದ್ದ. 
 
    ಅಂತೆಯೇ  ಮೊಹಮ್ಮದ್ ಅಶ್ಪಾಕ್ ಅವರು ಸೌದಿ ಅರೇಬಿಯಾಕ್ಕೆ ತೆರಳಿದ.  ಪ್ರಾರಂಭದ 2 ತಿಂಗಳು ಯಾವುದೇ ಕೆಲಸ ಮತ್ತು ಸಂಬಳವನ್ನೂ ನೀಡಿರುವುದಿಲ್ಲ. ನಂತರ ಸುಮಾರು 7 ತಿಂಗಳು ಬೇರೆ ಕಂಪನಿಯಲ್ಲಿ ಕೆಲಸ ನೀಡಿದ್ದರಾದರೂ ಆ ಕಾಲದಲ್ಲಿ ಮೊಹಮ್ಮದ್ ಅಶ್ಪಾಕ್ ಅವರನ್ನು  ಗೃಹ ಬಂಧನದ ರೀತಿಯಲ್ಲಿ ಇರಿಸಿಕೊಂಡು ಕೆಲಸ ಮಾಡಿಸಿಕೊಂಡಿದ್ದಾರೆ. ತದ ನಂತರ ಅಲ್ಲಿಂದ ಬಲವಂತವಾಗಿ ಹೊರಬಂದು ಸುಮಾರು 3 ತಿಂಗಳು ಕೆಲಸವಿಲ್ಲದೆ ಸೌಧಿ ಅರೇಬಿಯಾದಲ್ಲಿ ಪರಿತಪಿಸಿದ್ದರು. ಈ ಸಂದರ್ಭಗಳಲ್ಲಿ ಒಪ್ಪಂದದಂತೆ ಸಂಬಳವನ್ನೂ ನೀಡದೆ ಹಾಗೂ ಆಹಾರವನ್ನು ನೀಡದೆ ಸತಾಯಿಸಿರುತ್ತಾರೆ ಎಂಬ ಮಾಹಿತಿಯನ್ನು ತಿಳಿಸಿದ್ದಾರೆ.

     ಸಂಬಳವೂ ಇಲ್ಲದೆ, ಭಾರತಕ್ಕೆ ವಾಪಸ್ಸು ಬರಲು ಹಣವೂ ಇಲ್ಲದೆ ಹತ್ತಿರದ ಮಸೀದಿಯಲ್ಲಿ ಸುಮಾರು ಎರಡು ತಿಂಗಳು ಕಾಲ ಕಳೆಯುತ್ತಿರುವ ಸಂದರ್ಭದಲ್ಲಿ ʻಕೆ.ಎನ್.ಆರ್.ಐ ಜೆದ್ದಾ ಕನ್ನಡ ಸಂಘದʼ ಸದಸ್ಯರು ಮೊಹಮ್ಮದ್ ಅಶ್ಪಾಕ್ ಅವರನ್ನು ಕಂಡು  ಮೋಸ ಹೋದ ವಿಷಯವನ್ನು  ಅರಿತುಕೊಂಡಿದ್ದಾರೆ.  ನಂತರ ಮೊಹಮ್ಮದ್ ಅಶ್ಪಾಕ್ ತಾಯಿ ಹಾಗೂ ಕುಟುಂಬದವರು ಅನಿವಾಸಿ ಭಾರತೀಯ ಸಮಿತಿ ಕಛೇರಿಗೆ ಭೇಟಿ ನೀಡಿ, ತಮ್ಮ ಮಗನನ್ನು ಭಾರತಕ್ಕೆ ಕರೆಸುವಂತೆ ಕೋರಿಕೊಂಡಿದ್ದರು ಎಂದು ಡಾ. ಆರತಿ ಕೃಷ್ಣ ಅವರು ತಿಳಿಸಿದ್ದಾರೆ.
 
     ಸಂಕಷ್ಟಕ್ಕೆ ಗುರಿಯಾಗಿರುವವರ ಮನವಿ ಮೇರೆಗೆ ಸೌದಿ ಅರೇಬಿಯಾದ ಭಾರತೀಯ ರಾಯಭಾರಿ ಕಚೇರಿಗೆ ದೂರವಾಣಿ ಮುಖಾಂತರ ಸಂಪರ್ಕಿಸಿದಾಗ ಅವರು ತಕ್ಷಣ ಸ್ಪಂದಿಸಿರುತ್ತಾರೆ. ಅವರ ಸಹಕಾರದ ಜೊತೆಗೆ  ಅನಿವಾಸಿ ಭಾರತೀಯ ಸಮಿತಿಯು ಜೆದ್ದಾ ಕೌನ್ಸಿಲಿಂಗ್ ಜನರಲ್‍ರನ್ನು ಸಂಪರ್ಕಿಸಿ ತ್ವರಿತವಾಗಿ ಎಕ್ಸಿಟ್ ಪಾಸ್ ದೊರೆಯುವಂತೆ ವ್ಯವಸ್ಥೆ ಮಾಡಲಾಗಿತ್ತು. ಜೊತೆಗೆ  ಕೆ.ಎನ್.ಆರ್.ಐ ಜೆದ್ದಾ ಕನ್ನಡ ಸಂಘವು ವಿಮಾನ ಟಿಕೆಟ್ ಮತ್ತು ಭಾರತಕ್ಕೆ ವಾಪಸ್ಸಾಗುವವರೆಗೂ ವೆಚ್ಚಗಳನ್ನು ಭರಿಸಿ ನೆರವಾಗಿರುತ್ತಾರೆ ಎಂಬ ಮಾಹಿತಿಯನ್ನು ನೀಡಿದರು.

   ಈ ಸಂದರ್ಭದಲ್ಲಿ  ವಂಚನೆಗೊಳಗಾದ   ಮೊಹಮ್ಮದ್ ಅಶ್ಪಾಕ್ ಮತ್ತು ಅವರ ತಾಯಿ ಶ್ರೀಮತಿ ನೂರ್‍ಬಾನ್ ಮಾತನಾಡಿ, ನಮ್ಮ ಸಮಸ್ಯೆಗೆ ಸ್ಪಂದಿಸಿ, ತ್ವರಿತ ಗತಿಯಲ್ಲಿ ಭಾರತಕ್ಕೆ ಬರಲು ಸಹಾಯ ಮಾಡಿದ ಅನಿವಾಸಿ ಭಾರತೀಯ ಸಮಿತಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಜೊತೆಗೆ ಯಾರೇ ಆದರೂ ವಿದೇಶಕ್ಕೆ ತೆರಳುವಾಗ ಎಚ್ಚರವಹಿಸಬೇಕೆಂದು ಕೋರಿಕೊಂಡಿದ್ದಾರೆ

Publisher: ಕನ್ನಡ ನಾಡು | Kannada Naadu

Login to Give your comment
Powered by