ಬೆಳಗಾವಿ : ದಶಕಗಳ ಹಿಂದಿನಿಂದಲೂ ಬೆಳಗಾವಿಯಲ್ಲಿ ಅವ್ಯಾಹತವಾಗಿ ನಡೆದು ಕೊಂಡು ಬಂದಿರುವ ಮಕ್ಕಳ ಮಾರಾಟ ಜಾಲವನ್ನು ಬೆಳಗಾವಿ ಪೊಲೀಸ್ರು ಮತ್ತೊಮ್ಮೆ ಹೆಡೆಮೂರಿ ಕಟ್ಟಿದ್ದಾರೆ. ಗಡಿ ಜಿಲ್ಲೆ ಬೆಳಗಾವಿಯಲ್ಲಿ ನವಜಾತ ಶಿಶುಗಳ ಮಾರಟ ದಂಧೆ ನಡೆಯುವುದು ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಅಂತಹದ್ದೆ ಮಹತ್ವದ ಪ್ರಕರಣವೊಂದರಲ್ಲಿ ತೊಡಗಿದ್ದ ಐದು ಜನರು ಪೊಲೀಸ್ರ ಅತಿಥಿಗಳಾಗಿದ್ದಾರೆ.
ಬೆಳಗಾವಿ ಮಾಳಮಾರುತಿ ಠಾಣೆ ಪೊಲೀಸರು ಮಕ್ಕಳ ಮಾರಾಟ ಜಾಲವನ್ನು ಬಯಲಿಗೆಳೆಯುವ ಜೊತೆಗೆ, ಈ ಜಾಲದ ಕಿಂಗ್ಪಿನ್ ವೈದ್ಯ ಸೇರಿ ಐದು ಮಂದಿಯನ್ನು ಬಂಧಿಸಿದ್ದಾರೆ. ಕಿತ್ತೂರು ಮೂಲದ ಆರ್.ಎಂ.ಪಿ. ವೈದ್ಯ ಡಾ. ಅಬ್ದುಲ್ ಗಫಾರ್ ಖಾನ್, ನೇಗಿನಹಾಳ ಗ್ರಾಮದ ಮಹಾದೇವಿ ಜೈನ್, ಚಂದನ್ ಸುಭೇದಾರ್, ಪವಿತ್ರಾ ಮತ್ತು ಪ್ರವೀಣ ಎನ್ನುವವರನ್ನು ಬಂದಿಸಲಾಗಿದೆ.
ಜಿಲ್ಲೆಯಾಧ್ಯಂತ ಮಕ್ಕಳ ಮಾರಾಟ ಜಾಲ ಸಕ್ರಿಯವಾಗಿರು ಮಾಹಿತಿ ಆಗಾಗ ಕೇಳಿ ಬರುತ್ತಿತ್ತು. ಈ ಮಧ್ಯ ಬೆಳಗಾವಿ ನಗರದಲ್ಲಿ ಮಕ್ಕಳ ಮಾರಾಟ ಮಾಡುವ ಟೀಮ್ ಮತ್ತೆ ಕಾರ್ಯಾರಂಭ ಮಾಡುತ್ತಿದೆ ಎನ್ನುವ ಸುಳಿವಿನ ಬೆನ್ನಿತ್ತಿದ್ದ ಪೊಲೀಸರಿಗೆ ಈ ಸಂಘಟಿತ ಜಾಲವೇ ಪತ್ತೆಯಾಗಿದೆ. ಇಂಥದೊಂದು ಜಾಲ ಸಕ್ರೀಯವಾಗಿ ಕೆಲಸ ಮಾಡುತ್ತಿರುವ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಾಜಕುಮಾರ ಸಿಂಗಪ್ಪ ಅವರು ಪೊಲೀಸ್ರಿಗೆ ದೂರು ನೀಡಿದರು. ಆ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆಗೆ ಮುಂದಾದ ಪೊಲೀಸರಿಗೆ ಮಕ್ಕಳ ಮಾರಾಟದ ಕಸುಬುದಾರರು ಸಿಕ್ಕಿಬಿದ್ದಿದ್ದಾರೆ.
ಮೂಲತಃ ಸವದತ್ತಿಯವನಾದ ಆರ್.ಎಮ್.ಪಿ ವೈದ್ಯ, ಡಾ.ಅಬ್ದುಲ್ ಗಫಾರ್ ಖಾನ್ ಚೆನ್ನಮ ಕಿತ್ತೂರಿನ ಸೋಮವಾರ ಪೇಟೆಯಲ್ಲಿ ವೃತ್ತಿ ನಡೆಸುತ್ತಿದ್ದ. ಇದೇ ಡಾ.ಅಬ್ದುಲ್ ಗಫಾರ್ ಖಾನ್ನಿಂದ 60 ಸಾವಿರ ರೂ.ಗೆ ಮಗು ಖರೀದಿಸಿ, ಬೆಳಗಾವಿಯಲ್ಲಿ ಆ ಮಗುವನ್ನು 1.40ಲಕ್ಷ ರೂ. ಕ್ಕೆ ಮಾರುತ್ತಿದ್ದಾಗ ಮಹಿಳೆಯನ್ನು ಬಲೆಗೆ ಬೀಳಿಸಿಕೊಂಡ ಪೊಲೀಸ್ರು ನಂತರ ವೈದ್ಯ ಸೇರಿ ನಾಲ್ವರನ್ನು ಬಂಧಿಸಿದ್ದಾರೆ.
ಪೊಲೀಸ್ ಆಯುಕ್ತರಾದ ಡಾ.ಮಾರ್ಟಿನ್ ಮಾರ್ಬನ್ಯಾಂಗ್ ಮಾತನಾಡಿ ತಮ್ಮ ಇಲಾಖೆಗೆ ಬಂದ ಮಾಹಿತಿಯ ಆಧಾರವಾಗಿ ಡಿಸಿಪಿ ಪಿ. ವಿ. ಸ್ನೇಹಾ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಜೆ. ಎಂ. ಕಾಲಿಮಿರ್ಚಿ ನೇತೃತ್ವದಲ್ಲಿ ದಾಳಿ ಮಾಡಿನಡೆಸಿ ಆರೋಪಿತರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡುವಲ್ಲಿ ನಾವು ಯಶಶ್ವಿಯಾಗಿದ್ದೇವೆ. ಇಂತಹ ಜಾಲ ಬೆಳಗಾವಿ ಭಾಗದಲ್ಲಿ ಆಗಾಗ ಕಾರ್ಯಾಚರಣೆ ಮಾಡುತ್ತಿರುವ ಬಗ್ಗೆ ಆಗಾಗ ಪ್ರಕರಣಗಳು ಕೇಳಿಬರುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಇವರು ಯಾರ ಕೈಗೂ ಸಿಗದೆ ಮಕ್ಕಳ ಮಾರಾಟ ಮಾಡುವ ಕೆಲಸದಲ್ಲಿ ತೊಡಗಿಕೊಂಡಿದ್ದರು. ಬಂದನಕ್ಕೆ ಒಳಗಾದ ಮಕ್ಕಳ ಮಾರಾಟ ಜಾಲದ ತಂಡದವರು ಸರಿ ಸುಮಾರು 60 ಸಾವಿರದಿಂದ 1.50 ಲಕ್ಷಕ್ಕೆ ಮಗುವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ :
ಆರೋಪಿ ನೇಗಿನಾಳ ಮೂಲದ ಮಹದೇವಿಯು 60 ಸಾವಿರ ರೂ. ಕೊಟ್ಟು ವೈದ್ಯ ಡಾ. ಅಬ್ದುಲ್ ಗಫಾರ್ನಿಂದ 30 ದಿನದ ಹೆಣ್ಣು ಮಗುವನ್ನು ಖರೀದಿಸಿದ್ದು, ಆ ಮಗುವನ್ನು ಬೆಳಗಾವಿಯಲ್ಲಿ 1.40 ಲಕ್ಷ ರೂ.ಗೆ ಮಾರಾಟ ಮಾಡಲು ಮುಂದಾಗಿದ್ದರು. ಈ ಕುರಿತ ಜಾಡು ಹಿಡಿದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸರ್ಕಾರಿ ದತ್ತು ಕೇಂದ್ರದ ಸಂಯೋಜಕರಾದ ರಾಜಕುಮಾರ ಸಿಂಗಪ್ಪ ರಾಠೋಡರು ಮಾಳಮಾರುತಿ ಪೊಲೀಸ್ರಿಗೆ ಮಾಹಿತಿ ನೀಡಿದ್ದರು.
ಮಾಹಿತಿ ಸಿಕ್ಕ ತಕ್ಕಣ ಕಾರ್ಯಪ್ರವೃತ್ತರಾದ ಮಾಳಮಾರುತಿ ಪೊಲೀಸರು, ಈ ಜಾಲದ ಬಗ್ಗೆ ರಹಸ್ಯ ಕಾರ್ಯಾಚರಣೆ ನಡೆಸಿದ ಪೊಲೀಸ್ರು, ಮಾರುವೇಷದಲ್ಲಿ ಬಂದು ಮಹದೇವಿಯನ್ನು ಸಂಪರ್ಕಿಸಿ ಮಗುವನ್ನು ಖರೀದಿಸುವುದಾಗಿ ನಂಬಿಸಿದ್ದರು. ಮಹದೇವಿ ಮಗುವನ್ನು ಮಾರಾಟ ಮಾಡಲು ಬಂದಾಗ ಆಕೆಯನ್ನು ಬಲೆಗೆ ಬೀಳಿಸಿಕೊಂಡು ಹೆಣ್ಣು ಮಗುವನ್ನು ರಕ್ಷಿಸಿ ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದಾರೆ. ನಂತರ ಮಹದೇವಿಯನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ವೈದ್ಯನ ಬಗ್ಗೆ ಬಾಯಿಬಿಟ್ಟಿದ್ದಾರೆ.
ಇನ್ಸ್ಪೆಕ್ಟರ್ ಕಾಲಿಮಿರ್ಚಿ ಅವರ ನೇತ್ರತ್ವದಲ್ಲಿ ಸಬ್ ಇನ್ಸ್ಪೆಕ್ಟರ್ ರಾಮಗೌಡ ಸಂಕನಾಳ ಹಾಗೂ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡು ವೈದ್ಯ ಡಾ.ಅಬ್ದುಲ್ ಗಪಾರ್ ಸೇರಿದಂತೆ ನಾಲ್ಕು ಮಂದಿಯನ್ನು ಬಂಧಿಸಿದ್ದರು. ನಂತರ ವಿಚಾರಣೆ ತೀರ್ವಗೊಳಿಸಿ, ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.
ಈ ಗ್ಯಾಂಗ್ಗೆ ಮದುವೆಗೂ ಮುನ್ನ ಗರ್ಭಿಣಿಯಾಗುವ ಯುವತಿಯರೇ ಇವರ ಟಾರ್ಗೆಟ್ ಆಗಿದ್ದರು ಎನ್ನುವ ಮಾಹಿತಿ ಪೊಲೀಸ್ ವಿಚಾರಣೆಯಲ್ಲಿ ತಿಳಿದುಬಂದಿದೆ. ಕದ್ದು ಮುಚ್ಚಿ ಆಗಿರುವ ಎಡವಟ್ಟನ್ನು ಅಬಾರ್ಷನ್ ಮಾಡಿ ಸರಿ ಮಾಡಿಕೊಳ್ಳಬೇಕು ಎಂದು ವೈದ್ಯನ ಬಳಿ ಬಂದಾಗ ಆತ ತಾನೇ ಮಗುವನ್ನು ಸಾಕುವುದಾಗಿ ಹೇಳಿ ಅವರ ಮನವೊಲಿಸಿ ಎಂಟು ತಿಂಗಳು ತುಂಬಿದ ಬಳಿಕ ಬರುವಂತೆ ಹೇಳಿ ಕಳುಹಿಸುತ್ತಿದ್ದನಂತೆ. ನಂತರ ಆಪರೇಷನ್ ಮಾಡಿ ಮಗುವನ್ನು ತೆಗೆದು ಅವರಿಗೆ 20 ಸಾವಿರ ರೂ. ಹಣ ಕೊಟ್ಟು ಮಗುವನ್ನು ತಾನೇ ಪಡೆದು ಮೂರ್ನಾಲ್ಕು ತಿಂಗಳ ಕಾಲ ಮಗುವನ್ನು ಪೋಷಣೆ ಮಾಡಿ ನಂತರ ಮಕ್ಕಳಿಲ್ಲದವರಿಗೆ ಹೆಚ್ಚಿನ ಹಣಕ್ಕೆ ಮಾರಾಟ ಮಾಡುತ್ತಿದ್ದುದು ವಿಚಾರಣೆಯಿಂದ ಬೆಳಕಿಗೆ ಬಂದಿದೆ.
Publisher: ಕನ್ನಡ ನಾಡು | Kannada Naadu