ಬೆಂಗಳೂರು: ಪ್ರಸ್ತುತ ಸಾಲಿನ ʻಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆʼಗೆ ರೈತರು ತಮ್ಮ ಹೆಸರು ನೋಂದಣಿ ಮಾಡಿಕೊಳ್ಳುವಂತೆ ಪ್ರಕಟಣೆ ಮಾಡಲಾಗಿದ್ದು, ರೈತರ ಅಭದ್ರತೆ ತಪ್ಪಿಸುವ ನಿಟ್ಟಿನಲ್ಲಿ ಇದು ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ರೈತರು ಪರಿಹಾರದ ನೀರಿಕ್ಷೆ ಮಾಡಬಹುದಾಗಿದೆ.
ರೈತರು 2024-25ನೇ ಸಾಲಿನಲ್ಲಿ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಗೆ ಹೆಸರು ನೋಂದಾಯಿಸಲು ಕರೆ ನೀಡಲಾಗಿದೆ. ಯೋಜನೆಗೆ ಹೆಸರು ನೋಂದಾಯಿಸಿದ ರೈತರಿಗೆ ಬೆಳೆ ನಷ್ಟವಾದರೆ ಪರಿಹಾರ ಸಿಗಲಿದೆ. ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯು 2024-25ನೇ ಸಾಲಿನಲ್ಲಿಯೂ ಜಾರಿಯಲ್ಲಿದೆ. ಅತಿವೃಷ್ಟಿ, ಅನಾವೃಷ್ಟಿ, ಅಕಾಲಿಕ ಮಳೆ ಮುಂತಾದ ಪ್ರಾಕೃತಿಕ ವಿಕೋಪ ಸೇರಿದಂತೆ ಹಲವಾರು ಕಾರಣಗಳಿಂದ ಬೆಳೆ ನಷ್ಟ ಉಂಟಾದಾಗ ರೈತರಿಗೆ ವಿಮಾ ರಕ್ಷಣೆ ಮತ್ತು ಆರ್ಥಿಕ ಬೆಂಬಲ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ.
ಈ ಯೋಜನೆಯಡಿ ರೈತರ ತಮ್ಮ ವಿಮಾ ಕಂತನ್ನು ಆಹಾರ ಮತ್ತು ಎಣ್ಣೆ ಕಾಳು ಬೆಳೆಗಳಿಗೆ ಮುಂಗಾರು ಹಂಗಾಮಿಗೆ ಶೇ. 2 ಎಂದು ಪರಿಗಣಿಸಲಾಗಿದೆ. ಮುಖ್ಯ ಬೆಳೆಗಳಿಗೆ ಯೋಜನೆಯನ್ನು ಗ್ರಾಮ ಪಂಚಾಯಿತಿ ಮಟ್ಟಕ್ಕೆ ಅಳವಡಿಸಲಾಗುವುದು. ಈ ಯೋಜನೆಯು ಸಾಲ ಪಡೆದ ಹಾಗೂ ಸಾಲ ಪಡೆಯದ ರೈತರಿಗೆ ಐಚ್ಛಿಕವಾಗಿದ್ದು, ವಿಮಾ ಮೊತ್ತವು ಎಲ್ಲರಿಗೂ ಒಂದೇ ಆಗಿರುತ್ತದೆ.
ಬಿತ್ತನೆ ಅಥವಾ ನಾಟಿ ಕಾಲಕ್ಕೆ ಆಗುವ ನಷ್ಟ, ಬೆಳೆವಣಿಗೆ ಹಂತದಲ್ಲಿ ಆಗುವ ನಷ್ಟ ಹಾಗೂ ಕಟಾವಿನ ನಂತರದ ನಷ್ಟವನ್ನು ಸಹ ʻಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಲ್ಲಿ ಪರಿಗಣಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ ವಿವಿಧ ಜಿಲ್ಲೆಗಳಿಗೆ ವಿವಿಧ ವಿಮಾ ಕಂಪನಿಯನ್ನು ಆಯ್ಕೆ ಮಾಡಲಾಗಿದ್ದು, ವಿಮಾ ಅರ್ಜಿಗಳು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಲಭ್ಯವಿದೆ. ಈ ಯೋಜನೆಯಡಿ ರೈತರು ತಮ್ಮ ಅರ್ಜಿಯನ್ನು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಲ್ಲಿಸಿ ನೋೂಂದಾಯಿಸಿಕೊಳ್ಳಬಹುದಾಗಿದೆ.
ಪ್ರಸಕ್ತ (2024) ಸಾಲಿನ ಮುಂಗಾರು ಹಂಗಾಮಿನ ವಿಮಾ ಮೊತ್ತ ಮತ್ತು ರೈತರ ವಿಮಾ ಕಂತಿನ ವಿವರ. ಭತ್ತ (ನೀರಾವರಿ) ಸಾಮಾನ್ಯ ವಿಮಾ (ಪ್ರತಿ ಎಕರೆಗೆ) ವಿಮಾ ಮೊತ್ತ ರೂ. 37,738.28, ರೈತರ ವಿಮಾಕಂತು ಶೇ.2 ರಂತೆ 754.77, ಭತ್ತ (ಮಳೆಯಾಶ್ರಿತ) ವಿಮಾ ಮೊತ್ತ 25,799.63 ರೂ., ರೈತರ ವಿಮಾ ಕಂತು ಶೇ.2 ರಂತೆ ರೂ 515.99. ನೋಂದಾಯಿಸಿಕೊಳ್ಳಲು 2024 ರ ಆಗಸ್ಟ್, 16 ಕೊನೆಯ ದಿನವಾಗಿದೆ. ಮುಸುಕಿನ ಜೋಳ (ಮಳೆಯಾಶ್ರಿತ) ವಿಮಾ ಮೊತ್ತ ರೂ. 22,865.55, ರೈತರ ವಿಮಾ ಕಂತು ಶೇ.2 ರಂತೆ ರೂ. 457.31. ನೋಂದಣಿಗೆ ಜುಲೈ, 31 ಕೊನೆಯ ದಿನವಾಗಿದೆ.
ಈ ಯೋಜನೆಯಲ್ಲಿ ರೈತರು ಅರ್ಜಿಯೊಂದಿಗೆ ಪಹಣಿ, ಬ್ಯಾಂಕ್ ಪಾಸ್ ಪುಸ್ತಕ, ಮತ್ತು ಆಧಾರ್ ಸಂಖ್ಯೆಯನ್ನು ನೀಡಿ ನೋಂದಾಯಿಸಿಕೊಳ್ಳಬೇಕು. ಯೋಜನೆಯ ಮಾಹಿತಿಯನ್ನು ಸಂರಕ್ಷಣೆ ತಂತ್ರಾಂಶದಲ್ಲಿ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ, ಹೋಬಳಿಯ ರೈತ ಸಂಪರ್ಕ ಕೇಂದ್ರ ಹಾಗೂ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಬಹುದಾಗಿದೆ. ಜೊತೆಗೆ http://www.samrakshane.karnataka.gov.in/ ವೆಬ್ ಸೈಟ್ನಲ್ಲಿಯೂ ಮಾಹಿತಿಯ ನೊಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಈ ಯೋಜನೆಯನ್ನು ರೈತರು ಸದುಪಯೋಗ ಪಡಿಸಿಕೊಳ್ಳುವಂತೆ ಕೃಷಿ ಇಲಾಖೆ ಮನವಿ ಮಾಡಿದೆ.
Publisher: ಕನ್ನಡ ನಾಡು | Kannada Naadu