ಬೆಂಗಳೂರು : ವಾಹನ ಚಾಲನಾ ಪರವಾನಗಿಗಾಗಿ, ಡಿಎಲ್ ಪಡೆಯಲು ಇನ್ನು ಮುಂದೆ ಆರ್ಟಿಒಗೆ ಹೋಗಬೇಕಾಗುವ ಪ್ರಮೇಯವನ್ನು ಬಂದು ಮಾಡುವುದಕ್ಕೆ ಸರಕಾರ ಮಹತ್ವದ ನಿರ್ಣಯ ತೆಗೆದುಕೊಂಡಿದೆ. ಜೂನ್ 1ರಿಂದ ವಾಹನ ಚಾಲನಾ ಪರವಾನಗಿ (ಡಿಎಲ್) ನೀಡಿಕೆ ನಿಯಮಗಳು ಬದಲಾಗುತ್ತವೆ. ಡಿಎಲ್ ಪಡೆಯಲು ಚಾಲನಾ ಪರೀಕ್ಷೆಯನ್ನೂ ಎದುರಿಸಬೇಕಿಲ್ಲ ಎನ್ನುವ ಸುದ್ದಿಯನ್ನು ಇಲಾಖೆ ಅಧಿಕೃತಮಾಡಿದೆ.
ಡಿಎಲ್ ಪಡೆಯುವ ಪ್ರಕ್ರಿಯೆಯಲ್ಲಿ ಒಂದಿಷ್ಟು ಬದಲಾವಣೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಆದರೆ ಆ ಬದಲಾವಣೆಗಳು ತಕ್ಷಣದಲ್ಲಿ ಜಾರಿಗೆ ಬರುವ ಬಗ್ಗೆ ಖಚಿತತೆ ಇರದಿದ್ದರೂ, ಡಿಎಲ್ ಪಡೆಯುವ ಸಂಬಂಧ ಕೇಂದ್ರ ಸರ್ಕಾರವು ತರಲು ಹೊರಟಿರುವ ಬದಲಾವಣೆಗಳ ವಿವರಗಳನ್ನು ಇಲಾಖೆಯ ಮೂಲಗಳಿಂದ ಲಬ್ಯವಾಗಿದೆ..
ಡಿಎಲ್ ಪಡೆಯುವುದು, ಡಿಎಲ್ ಪಡೆಯಲು ಚಾಲನಾ ಪರೀಕ್ಷೆ ಮತ್ತು ಚಾಲನಾ ತರಬೇತಿ ನೀಡುವ ಕೇಂದ್ರಗಳಿಗೆ ಸಂಬಂಧಿಸಿದ ಪ್ರಕ್ರಿಯೆಗಳಲ್ಲಿ ಗಣನೀಯ ಬದಲಾವಣೆಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಜಾರಿಗೆ ತರುವ ನಿಟ್ಟಿನಲ್ಲಿ ಮುಂದಾಗಿದೆ. ಒಟ್ಟಾರೆ, ಈ ಪ್ರಕ್ರಿಯೆಗಳನ್ನು ಸರಳಗೊಳಿಸಲು ಮತ್ತು ವಾಹನ ಚಾಲನಾ ತರಬೇತಿಯಲ್ಲಿ ಮತ್ತಷ್ಟು ಶಿಸ್ತು ತರುವ ಉದ್ದೇಶದಿಂದ ಈ ಬದಲಾವಣೆಗಳನ್ನು ತರಲಾಗಿದೆ ಎಂದು ಕೇಂದ್ರ ಸಾರಿಗೆ ಸಚಿವಾಲಯ ಅಭಿಪ್ರಾಯ ಪಡುತ್ತಿದೆ. ಆದರೆ ಚಾಲನಾ ತರಬೇತಿ ನೀಡುವ ಕೇಂದ್ರಗಳಿಗೆ ಸಂಬಂಧಿಸಿದ ನೂತನ ನಿಯಮಗಳಿಗೆ ಸಾರ್ವಜನಿಕ ವಲಯದಲ್ಲಿ ಅದಷ್ಟೇ ಪ್ರಮಾಣದ ಅಪಸ್ವರಗಳು ಕೇಳಿಬರುತ್ತಿದೆ.
ಕೇಂದ್ರ ಸಾರಿಗೆ ಇಲಾಖೆಯ ಪ್ರಕಾರ ಅತ್ಯಾಧುನಿಕ ಸವಲತ್ತುಗಳ ಮೂಲಕ, ಅತ್ಯಾಧುನಿಕ ವಾಹನಗಳ ಮೂಲಕ ಪರಿಣಾಮಕಾರಿಯಾಗಿ ತರಬೇತಿ ನೀಡುವುದು ಇದರ ಉದ್ದೇಶ. ಚಾಲನಾ ತರಬೇತಿಯಲ್ಲಿನ ನ್ಯೂನತೆಗಳ ಕಾರಣದಿಂದಲೇ ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ದೇಶದಲ್ಲಿ ಪ್ರತಿ ವರ್ಷ ಸಂಭವಿಸುವ ರಸ್ತೆ ಅಪಘಾತಗಳಲ್ಲಿ ಶೇ. 98ರಷ್ಟು ಅಪಘಾತಗಳು ಚಾಲಕನ ತಪ್ಪಿನಿಂದ ಸಂಭವಿಸುತ್ತಿವೆ. ಚಾಲನಾ ತರಬೇತಿಯ ಹಂತದಲ್ಲೇ ಬದಲಾವಣೆ ತರುವುದರಿಂದ ಇಂತಹ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದು ಎನ್ನುವ ಕಾರಣಕ್ಕೆ ಇಂಥಹ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಸಂಬಂಧಪಟ್ಟ ಸಚಿವಾಲಯದ ಅಧಿಸೂಚನೆಯಲ್ಲಿ ವಿವರಿಸಲಾಗಿದೆ.
ತರಬೇತಿಯನ್ನು ಕಠಿಣಗೊಳಿಸುವ ಉದ್ದೇಶದಿಂದ ‘ಚಾಲನಾ ತರಬೇತಿ ಕೇಂದ್ರ’ಗಳ ಮಾನ್ಯತಾ ನಿಯಮಗಳನ್ನು ಕಠಿಣಗೊಳಿಸಲಾಗಿದೆ. ಇಂತಹ ಕೇಂದ್ರಗಳು ಹೊಂದಬೇಕಾದ ಮೂಲಸೌಕರ್ಯಗಳು, ತರಬೇತಿ ಸಿಬ್ಬಂದಿಯ ಅರ್ಹತೆಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಸಣ್ಣ ಮಟ್ಟದ ಚಾಲನಾ ತರಬೇತಿ ಕೇಂದ್ರಗಳಿಗೆ ಈ ನಿಯಮಗಳು ವಾಸ್ತವದಲ್ಲಿ ಹೊರೆಯಾಗಲಿವೆ. ನಿಯಮಗಳಲ್ಲಿ ಉಲ್ಲೇಖಿಸಿರುವಷ್ಟು ಮೂಲಸೌಕರ್ಯವನ್ನು ಕ್ರೂಢಿಕರಿಸಿಕೊಳ್ಳುವುದು ಸಹ ಖಾಸಗಿ ಸಂಸ್ಥೆಗಳಿಗೆ ಆರ್ಥಿಕವಾಗಿ ತೀರಾ ಹೊರೆಯಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಕೇಂದ್ರದ ಈ ನೀತಿ ಜಾರಿಗೆ ಬಂದರೆ ಸಣ್ಣ ಮಟ್ಟದ ತರಬೇತಿ ಕೇಂದ್ರಗಳು ಬಾಗಿಲು ಹಾಕಬೇಕಾದ ಅನಿವಾರ್ಯ ಎದುರಾಗಬಹುದು ಎಂಬ ಕಳವಳವೂ ಕೇಳಿಬರುತ್ತಿದೆ. ಕೇಂದ್ರ ಸಾರಿಗೆ ಇಲಾಖೆಯ ಈ ನೀತಿ ಸೂಕ್ತವಲ್ಲ ಎನ್ನುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಈಗಾಗಲೇ ಪ್ರತಿಭಟಿಸಿರುವುದನ್ನು ನಾವು ಕಂಡಿದ್ದೇವೆ.
ಕೇಂದ್ರ ಸಾರಿಗೆ ಇಲಾಖೆ ಹೊರಡಿಸಿರುವ ನೂತನ ನಿಯಮಾವಳಿ ಪ್ರಕಾರ ನಾಲ್ಕು ಚಕ್ರದ ವಾಹನಗಳ ತರಬೇತಿ ಕೇಂದ್ರ ನಡೆಸಲು ಕನಿಷ್ಠ 2 ಎಕರೆ ಜಮೀನು ಹೊಂದಿರಬೇಕು. ಇದಲ್ಲದೇ ಕಂಪ್ಯೂಟರ್ ಆಧಾರಿತ ತರಗತಿ, ಎಲ್ಲಾ ವರ್ಗದ ವಾಹನಗಳ ಸಿಮ್ಯುಲೇಟರ್ಗಳು, ಎಲ್ಲಾ ವರ್ಗದ ವಾಹನಗಳು, ಪ್ರತ್ಯೇಕ ತರಬೇತಿ ಮತ್ತು ಪರೀಕ್ಷಾ ಟ್ರ್ಯಾಕ್ ಹೊಂದಿರಬೇಕು ಎನ್ನುತ್ತದೆ.
ಇಷ್ಟು ಬಂಡವಾಳ ಹೂಡಿ ತರಬೇತಿ ಕೇಂದ್ರ ಆರಂಭಿಸಲು ದೊಡ್ಡ–ದೊಡ್ಡ ಕಾರ್ಪೊರೇಟ್ ಕಂಪನಿಗಳಿಂದ ಮಾತ್ರ ಸಾಧ್ಯ. ಇದು ಈ ಕ್ಷೇತ್ರದಲ್ಲಿ ದೊಡ್ಡ ಕಾರ್ಪೊರೇಟ್ ಕಂಪನಿಗಳ ಏಕಸ್ವಾಮ್ಯಕ್ಕೆ ಅವಕಾಶ ಮಾಡಿಕೊಡುತ್ತದೆ ಎಂದು ಮುಂಬೈನ ‘ವಾಹನ ಚಾಲನಾ ತರಬೇತಿ ಕೇಂದ್ರಗಳ ಸಂಘಟನೆ’ ಕಳವಳ ವ್ಯಕ್ತಪಡಿಸಿದೆ. ಈ ಮಾರ್ಗಸೂಚಿಗಳನ್ನೇ ಆಧರಿಸಿ ಕೇರಳ ಸರ್ಕಾರವು ಮೇ 1ರಿಂದಲೇ ನೂತನ ನಿಯಮಗಳ ಜಾರಿಗೆ ಮುಂದಾಗಿತ್ತು. ಆದರೆ ತೀವ್ರ ಆಕ್ಷೇಪ ವ್ಯಕ್ತವಾದ ಕಾರಣ ಕೇರಳ ಸರ್ಕಾರವು ಈ ನಿಯಮಗಳನ್ನು ಸಡಿಲಗೊಳಿಸಿದೆ.
ನೂತನ ನಿಯಮಗಳ ಪ್ರಕಾರ ವಾಹನ ಚಾಲನಾ ಪರೀಕ್ಷೆಗಾಗಿ ಪ್ರಾದೇಶಿಕ ಸಾರಿಗೆ ಕಚೇರಿಗೇ (ಆರ್ಟಿಒ) ಹೋಗಬೇಕಿಲ್ಲ. ಚಾಲನಾ ಪರೀಕ್ಷೆ ಎದುರಿಸಲು ಮತ್ತು ಡಿಎಲ್ ಪಡೆಯಲು ಆರ್ಟಿಒ ಕಚೇರಿಗಳಲ್ಲಿ ಸರದಿಯಲ್ಲಿ ನಿಲ್ಲಬೇಕಾದ ಸ್ಥಿತಿ ವಾಸಸ್ತವದಲ್ಲಿ ಇದೆ. ಮೂಲಸೌಕರ್ಯ ಕೊರತೆ ಇರುವ ಕಾರಣ ಪರೀಕ್ಷೆ ಮತ್ತು ಡಿಎಲ್ ನೀಡಿಕೆ ಪ್ರಕ್ರಿಯೆ ವಿಳಂಬವಾಗುತ್ತಿದೆ. ಈ ವಿಳಂಬವನ್ನು ತಪ್ಪಿಸುವ ಉದ್ದೇಶದಿಂದ ಖಾಸಗಿ ಚಾಲನಾ ತರಬೇತಿ ಶಾಲೆಗಳೇ ಚಾಲನಾ ಪರೀಕ್ಷೆಯನ್ನೂ ನಡೆಸಲು ಅವಕಾಶ ಮಾಡಿಕೊಡಲಾಗುತ್ತಿದೆ.
ಮಾನ್ಯತೆ ಪಡೆದ ಚಾಲನಾ ತರಬೇತಿ ಕೇಂದ್ರಗಳು ಚಾಲನಾ ಪರೀಕ್ಷೆ ನಡೆಸುವ ಅವಕಾಶ ಪಡೆಯಲಿವೆ. ತರಬೇತಿ ಕೇಂದ್ರಗಳಲ್ಲಿ ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಆಯಾ ಕೇಂದ್ರಗಳು ಪ್ರಮಾಣಪತ್ರ ನೀಡಲಿವೆ. ಡಿಎಲ್ ಪಡೆಯಲು ಅರ್ಜಿ ಸಲ್ಲಿಸುವಾಗ ಆರ್ಟಿಒನಲ್ಲಿ ಆ ಪ್ರಮಾಣಪತ್ರವನ್ನು ಸಲ್ಲಿಸಿದರೆ, ಮತ್ತೆ ಚಾಲನಾ ಪರೀಕ್ಷೆ ಎದುರಿಸುವ ಅವಶ್ಯಕತೆ ಇರುವುದಿಲ್ಲ. ಇದರ ಜತೆಯಲ್ಲಿ ನೇರವಾಗಿ ಆರ್ಟಿಒನಲ್ಲೇ ಚಾಲನಾ ಪರೀಕ್ಷೆ ಎದುರಿಸುವ ವ್ಯವಸ್ಥೆಯೂ ಮುಂದುವರಿಯಲಿದೆ. ಹೀಗೆ ಚಾಲನಾ ಪರೀಕ್ಷೆ ಎದುರಿಸಲು ಸಾರ್ವಜನಿಕರಿಗೆ ಬಹು ಆಯ್ಕೆಯನ್ನು ಈ ನಿಯಮಾವಳಿಗಳು ಮಾಡಿಕೊಡುತ್ತವೆ.
ಖಾಸಗಿ ವ್ಯಕ್ತಿಗಳು ಮಾತ್ರವಲ್ಲದೇ ಸ್ವಯಂ ಸೇವಾ ಸಂಘಟನೆಗಳು, ಕಾರ್ಪೊರೇಟ್ ಕಂಪನಿಗಳು, ವಾಹನ ತಯಾರಿಕಾ ಕಂಪನಿಗಳು ಮತ್ತು ಯಾವುದೇ ರೀತಿಯ ಕಂಪನಿಯೂ ಇಂತಹ ಕೇಂದ್ರಗಳನ್ನು ಆರಂಭಿಸಬಹುದು. ಈ ಕ್ಷೇತ್ರದಲ್ಲಿ ಯಾವುದೋ ಒಂದು ಕಂಪನಿಯು ಏಕಸ್ವಾಮ್ಯ ಸಾಧಿಸುವುದನ್ನು ತಪ್ಪಿಸಲೂ ನೂತನ ನಿಯಮಾವಳಿಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ಒಂದು ಕಂಪನಿಯು ರಾಜ್ಯವೊಂದರಲ್ಲಿ ಗರಿಷ್ಠ ಐದು ತರಬೇತಿ ಕೇಂದ್ರಗಳನ್ನಷ್ಟೇ ಸ್ಥಾಪಿಸಲು ಅವಕಾಶವಿದೆ.
ಈ ರೀತಿಯ ತರಬೇತಿ ಮತ್ತು ಪರೀಕ್ಷೆ ನಡೆಸಲು ಚಾಲನಾ ತರಬೇತಿ ಕೇಂದ್ರಗಳು ಹೊಂದಿರಬೇಕಾದ ಮೂಲಸೌಕರ್ಯಗಳು ಇರಬೇಕು ಎಂಬ ಕಾನೂನನ್ನು ಮಾಡಿದೆ.
Publisher: ಕನ್ನಡ ನಾಡು | Kannada Naadu