ಬೆಂಗಳೂರು: ಹಿರಿಯ ನಟ ಅನಂತ್ ನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ನೆಲಮಂಗಲ ಸಮೀಪದ ಗುಬ್ಬಿಗೂಡು ರೆಸಾರ್ಟ್ನಲ್ಲಿ ಚಿತ್ರ ಸಮೂಹ ಮತ್ತು ಆ್ ಸರ್ಕಲ್ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅನಂತ್ ನಾಗ್ ಮತ್ತು ಗಾಯತ್ರಿ ದಂಪತಿಗಳನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಅನಂತ್ನಾಗ್ ಅವರ ಸಿನಿಮಾದ ಹಾಡುಗಳನ್ನು ಹಾಡುವ ಮೂಲಕ ಇಡೀ ಕಾರ್ಯಕ್ರಮ ರಸಮಯವಾಗುವಂತೆ ಆಯೋಜಿಸಲಾಗಿತ್ತು. ಅವರೊಂದಿಗೆ ನಡೆದ ಸಂವಾದದಲ್ಲಿ 76 ವಸಂತಗಳ ಅನುಭವಗಳನ್ನು ಅವರು ಹಂಚಿಕೊಂಡರು. ಪದ್ಮಭೂಷಣ ಪ್ರಶಸ್ತಿ ಬಂದಿದ್ದು ಕನ್ನಡಿಗರಿಗೆ. ಕನ್ನಡಿಗರು ನನಗೆ ಕೊಟ್ಟಿರುವ ಪ್ರೀತಿಯನ್ನು ಎಂದೂ ಮರೆಯಲಾಗದು ಎಂದು ತಮ್ಮ ಹಲವು ಅನುಭವಗಳನ್ನು ಹೇಳಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರು, ಅನಂತ್ ನಾಗ್ ಅವರ ನಟನೆಗೆ ಯಾರೂ ಸಾಟಿ ಇಲ್ಲ. ಅಷ್ಟು ಮನೋಜ್ಞ ಅಭಿನಯ ಅವರದು. ಎಂಬತ್ತರ ಕಾಲಘಟ್ಟದಲ್ಲಿ ಹಿಂದಿ ಮತ್ತು ಇಂಗ್ಲೀಷ್ನಲ್ಲಿ ಮೂಡಿ ಬಂದ ಮಾಲ್ಗುಡಿ ಡೇಸ್ ಧಾರವಾಹಿಯನ್ನು ಮರೆಯಲು ಸಾಧ್ಯವೇ ಇಲ್ಲ. ಚಿತ್ರರಂಗದಲ್ಲಿ ಅನಂತ್ನಾಗ್ ಮತ್ತು ಶಂಕರ್ ನಾಗ್ ಜೋಡಿ ಹೊಸ ಮೋಡಿಯನ್ನು ಮಾಡಿತು. ಆ ಮೂಲಕ ಚಿತ್ರರಂಗಕ್ಕೆ ಹೊಸ ಸಂಚಲನ ತಂದಿತು ಎಂದರು.
ಈ ಸಂದರ್ಭದಲ್ಲಿ ಚಿತ್ರ ನಟಿ ಜಯಮಾಲ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಲಿಂಗದೇವರು, ಶೇಷಾದ್ರಿ, ಕನ್ನಡ ಪ್ರಭ ಸಂಪಾದಕ ರವಿಹೆಗಡೆ, ಸಪ್ತಾಹಿಕ ಸಂಪಾದಕ ಜೋಗಿ, ಗುಬ್ಬಿಗೂಡು ರಮೇಶ್ ಅವರುಗಳು ಅಭಿನಂದಿಸಿ ಮಾತನಾಡಿದರು.
Publisher: ಕನ್ನಡ ನಾಡು | Kannada Naadu