ಕನ್ನಡ ನಾಡು | Kannada Naadu

ವಿದ್ಯಾರ್ಥಿಗಳನ್ನು ಸಮಾಜದ ಉತ್ತಮ ಪ್ರಜೆಗಳನ್ನಾಗಿ ರೂಪಿಸುವುದು ಶಿಕ್ಷಕರ ಕರ್ತವ್ಯ–ಡಿ.ಕೆ.ಶಿವಕುಮಾರ್

28 Jan, 2025

 

ಬೆಂಗಳೂರು : ವಿದ್ಯಾರ್ಥಿಗಳನ್ನು ಸಮಾಜದ ಉತ್ತಮ ಪ್ರಜೆಗಳನ್ನಾಗಿ ರೂಪಿಸುವುದು ಶಿಕ್ಷಕರ ಕರ್ತವ್ಯ. ಶಿಕ್ಷಣದ ಜೊತೆ ಜೊತೆಯಲ್ಲಿಯೇ ಸಮಾಜದಲ್ಲಿ ಹೇಗೆ ಬದುಕಬೇಕೆಂಬ ಮಾರ್ಗದರ್ಶನವನ್ನು ಶಿಕ್ಷಕರು ನೀಡಿ ವಿದ್ಯಾರ್ಥಿಗಳನ್ನು ಸತ್ಪ್ರಜೆಗಳನ್ನಾಗಿ ರೂಪಿಸಿಬೇಕು. ಅವರನ್ನು ದೇಶದ ಆಸ್ತಿಯನ್ನಾಗಿ ತಯಾರು ಮಾಡಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

ಇಂದು ಸೆಂಟ್ರಲ್ ಕಾಲೇಜು ಕ್ಯಾಂಪಸ್‍ನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾದ ನೂತನವಾಗಿ ನೇಮಕವಾಗಿರುವ ಸಹಾಯಕ ಪ್ರಾಧ್ಯಾಪಕರುಗಳಿಗೆ  “ಹೊಸ ಹಾದಿ” ಒಂದು ದಿನದ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಪ ಮುಖ್ಯಮಂತ್ರಿಗಳು ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವನ್ನು ರೂಪಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಮಾಧ್ಯಮಗಳು ಪ್ರಮುಖವಾದ ನಾಲ್ಕು ಅಂಗಗಳು.  ಅದೇ ರೀತಿ ಶಿಕ್ಷಕ, ರೈತ, ಸೈನಿಕ, ಕಾರ್ಮಿಕರು ಸಮಾಜದ ಅಂಗಗಳು ಎಂದು ಶ್ಲಾಘಿಸಿದರು. 

ಶಿಕ್ಷಣ ಎಂದರೆ ಜ್ಞಾನ, ಕೌಶಲ್ಯ, ಬೋಧನೆ, ಸಂಶೋಧನೆಗಳ ಮೂಲಕ ಮುಂದಿನ ಪೀಳಿಗೆಗೆ ವರ್ಗಾಯಿಸುವ ವ್ಯವಸ್ಥೆ ಇದರಲ್ಲಿ ಕಲಿಕೆಯೂ ಒಂದು. ಇಂತಹ ಶಿಕ್ಷಣ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಧ್ಯಾಪಕರುಗಳಾಗಿರುವುದು ಹೆಮ್ಮೆಯ ವಿಷಯ. ನಮ್ಮ ರಾಜ್ಯದಲ್ಲಿ 200ಕ್ಕೂ ಹೆಚ್ಚು ಇಂಜಿನಿಯರ್ ಕಾಲೇಜು, 70 ಮೆಡಿಕಲ್ ಕಾಲೇಜುಗಳಿವೆ. ನಮ್ಮ ರಾಜ್ಯದಲ್ಲಿ ಶಿಕ್ಷಣವು ಉತ್ತಮ ಗುಣಮಟ್ಟದಿಂದ ಕೂಡಿದೆ. ನೆರೆ ರಾಜ್ಯಗಳಾದ ತಮಿಳುನಾಡು, ಕೇರಳದಲ್ಲೂ ಸಹ ಗುಣಮಟ್ಟದಿಂದಲೇ ಕೂಡಿದೆ. ಗ್ರಾಮೀಣ ಪ್ರದೇಶದ ಮಕ್ಕಳೂ ಕೂಡ ಇಂದು ಇಂಜಿನಿಯರ್, ಡಾಕ್ಟರ್ ಕೋರ್ಸ್‍ಗಳನ್ನು ಓದುತ್ತಿದ್ದಾರೆ ಹಾಗೂ ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಪ್ರಾಧ್ಯಾಪಕರುಗಳು ತಮ್ಮ ವಾಕ್‍ಚಾತುರ್ಯದ ಮೂಲಕ ವಿದ್ಯಾರ್ಥಿಗಳ ಗಮನ ಸೆಳೆದು ಅವರಿಗೆ ಜ್ಞಾನಾರ್ಜನೆಯನ್ನು ನೀಡಬೇಕು. ಅವರಲ್ಲಿ ಸಕಾರತ್ಮಾಕವಾಗಿ ಚಿಂತನೆ ಮಾಡುವ ಮನೋಭಾವ, ಆತ್ಮವಿಶ್ವಾಸ ತುಂಬಬೇಕು ಹಾಗೂ ನಮ್ಮ ಸಂಸ್ಕøತಿಯ ಬಗ್ಗೆ ಅರಿವು ಮೂಡಿಸಬೇಕು. ವಿದ್ಯಾರ್ಥಿಗಳು ಮುಂದೆ ಮಾಲೀಕರಾಗಿ ಬೇರೆಯವರಿಗೆ ಉದ್ಯೋಗವಕಾಶವನ್ನು ನೀಡುವಂತವರಾಗಬೇಕು ಎಂದು ಪ್ರಾಧ್ಯಾಪಕರಿಗೆ ಕಿವಿಮಾತು ಹೇಳಿದರು.

ನಾನು ಪದವೀಧರನಾದಾಗ ಆದ ಸಂತೋಷ ಕ್ಯಾಬಿನೇಟ್ ಮಂತ್ರಿಯಾದಾಗ, ಉಪಮುಖ್ಯಮಂತ್ರಿ ಆದಾಗ ನನಗೆ ದೊರಯಲಿಲ್ಲ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಶಿಕ್ಷಕರು ಸರ್ಕಾರದ ರಾಯಭಾರಿಗಳಾಗಬೇಕು ಎಂದು ತಿಳಿಸಿದರು.

ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ ಮಾತನಾಡಿ, ಇಲಾಖೆಯಲ್ಲಿ  ಸಹಾಯಕ ಪ್ರಾಧ್ಯಾಪಕರುಗಳಿಗೆ ನೇಮಕಾತಿ ಆದೇಶ ನೀಡುವವರೆಗೆ ಇದ್ದ ಸವಾಲುಗಳ ಕುರಿತು ವಿವರಿಸಿದರು. ನ್ಯಾಯಾಲಯದ ತಡೆಯಾಜ್ಞೆಯನ್ನು  ಶೀಘ್ರವಾಗಿ ಬಗೆಹರಿಸಿ ಪ್ರಾಧ್ಯಾಪಕರುಗಳಿಗೆ ನೇಮಕಾತಿ ಆದೇಶವನ್ನು ನೀಡಲಾಯಿತು ಎಂದು ತಿಳಿಸಿದರು.

ಉನ್ನತ ಶಿಕ್ಷಣ ಇಲಾಖೆಯು ಅಪ್ರೆಂಟಿಶಿಪ್ ಎಂಬೆಡೆಟ್ ಡಿಗ್ರಿ ಪ್ರೋಗ್ರಾಮ್ ಪ್ರಾರಂಭ ಮಾಡಿದೆ.  ಬಿಕಾಂ ಕೋರ್ಸ್‍ನ ಮೊದಲನೆ ಹಂತದಲ್ಲಿ ಪ್ರಾರಂಭ ಮಾಡಲಾಗಿದ್ದು, ರಾಜ್ಯದಲ್ಲಿ ಪ್ರಥಮ ಬಾರಿಗೆ 45 ಸರ್ಕಾರಿ ಪ್ರಥಮ ದರ್ಜೆ ಪಿಯು ಕಾಲೇಜುಗಳಲ್ಲಿ  ಅನುಷ್ಠಾನಕ್ಕೆ ತರಲಾಗಿದೆ. ಎರಡು ವರ್ಷ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ನಂತರ 5 ಮತ್ತು 6ನೇ ಸೆಮಿಸ್ಟರ್‍ಗಳಲ್ಲಿ ಕಂಪೆನಿಗಳಲ್ಲಿ ನಿಯೋಜನೆ ಮಾಡಲಾಗುತ್ತದೆ. ಅವರಿಗೆ ಸ್ಟೈಫಂಡ್‍ಅನ್ನು ನೀಡಲಾಗುತ್ತದೆ. ಪದವಿ ಮುಗಿಯುವುದರೊಳಗೆ ವಿದ್ಯಾರ್ಥಿಗಳು ತಮಗೆ ಇಷ್ಟವಾದ ಕ್ಷೇತ್ರದಲ್ಲಿ ತರಬೇತಿ ಪಡೆದು ಮುಂದಿನ ಉದ್ಯೋಗವಕಾಶಕ್ಕೆ ಸನ್ನದ್ದನಾಗಿರುತ್ತಾನೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ 60 ಸರ್ಕಾರಿ ಕಾಲೇಜುಗಳಿಗೆ ವಿಸ್ತರಣೆ ಮಾಡುವ ಯೋಜನೆ ಇದೆ ಎಂದು ತಿಳಿಸಿದರು.

310 ಪ್ರಾಂಶುಪಾಲರ ನೇಮಕಾತಿ ಪ್ರಕ್ರಿಯೆಯು ಪ್ರಾರಂಭವಾಗಿದ್ದು, ಅಂತಿಮ ಹಂತದಲ್ಲಿ ತಾಂತ್ರಿಕ ಸಮಸ್ಯೆ ನಿವಾರಣೆಯನ್ನು ಮುಂದಿನ ತಿಂಗಳ ಅಂತ್ಯದೊಳಗೆ ಪೂರ್ಣ ಮಾಡುವ ಭರವಸೆ ನೀಡಿದರು.
ಧಾರವಾಡದ ಉನ್ನತ ಶಿಕ್ಷಣ ಅಕಾಡೆಮಿಯ ಆಯುಕ್ತಾಲಯದಿಂದ 21 ದಿನಗಳ ಕಾಲ ಸಹಾಯಕ ಪ್ರಾಧ್ಯಾಪಕರುಗಳಿಗೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಈ ತರಬೇತಿಯಲ್ಲಿ ಭಾಗವಹಿಸಿ  ಖಾಸಗಿ ಕ್ಷೇತ್ರದ ಸ್ಪರ್ಧೆಗೆ ತಾವುಗಳು ಸಕಲ ಸನ್ನದ್ದರಾಗಬೇಕು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ತಮ್ಮ ಜ್ಞಾನರ್ಜನೆಯ ಲಾಭವಾಗಬೇಕು ಎಂದರು. 

ಕೆಸೆಟ್ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. 10 ವರ್ಷ ಶಿಕ್ಷಕನಾಗಿ ಕಾರ್ಯನಿರ್ವಹಿಸಿರುತ್ತೇನೆ. ಅನುಭವವಿದೆ. ಶಿಕ್ಷಕರ ಕಷ್ಟವೇನಿದೆ ಎಂದು ತಿಳಿದಿದೆ. ಕೌಶಲ್ಯ ತರಬೇತಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ 2024 ರಲ್ಲಿ 6 ವಿಶ್ವವಿದ್ಯಾಲಯದ ಆಯ್ದ 30 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸ ಹಮ್ಮಿಕೊಳ್ಳಲಾಯಿತು. ಈಸ್ಟ್ ಲಂಡನ್ ಆಫ್ ಯೂನಿವರ್ಸಿಟಿಗೆ ಹೋಗಿ ಶೈಕ್ಷಣಿಕ ಜ್ಞಾನ ಪಡೆದಿದ್ದಾರೆ ಎಂದು ತಿಳಿಸಿದರು.

ಶಿಕ್ಷಣ ಕ್ಷೇತ್ರದಲ್ಲಿ ಸುಮಾರು 450 ರಿಂದ 500 ಮಂಜೂರಾದ ಹುದ್ದೆಗಳು ತುಂಬುವುದರ ಜೊತೆಗೆ ಹೊಸದಾಗಿ ಹುದ್ದೆಗಳನ್ನು ಮಂಜೂರು ಮಾಡಲು ಪ್ರಯತ್ನ ಮಾಡಲಾಗುತ್ತಿದೆ.  ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹೊಸ ಹುದ್ದೆಯ ಸೃಷ್ಟಿಯ ಜೊತೆಗೆ ಹಳೆಯ ಹುದ್ದೆಗಳು ಭರ್ತಿ ಮಾಡುವ ಜವಾಬ್ದಾರಿ ಇದೆ ಎಂದರು.

ಹೊಸದಾಗಿ ನೇಮಕಾತಿ ಹೊಂದಿದ ಸಹಾಯಕ ಪ್ರಾಧ್ಯಾಪಕ ಚಲುವರಾಜು  ಮಾತನಾಡಿ,  ಕಾಯ ಅಳಿದರೂ ಕಾಯಕ ಉಳಿಯುತ್ತದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ಇಲಾಖೆ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆಯಲ್ಲಿ ಯಾವುದೇ ಭ್ರಷ್ಟಾಚಾರವೆಸಗದೆ  ನಮಗೆಲ್ಲ ನೇಮಕಾತಿ ಪತ್ರವನ್ನು ಮನೆಬಾಗಿಲಿಗೆ ತಲುಪಿಸಿದ್ದಾರೆ. ನೇಮಕಾತಿ ಪ್ರಕ್ರಿಯೆಯಲ್ಲಿ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳನ್ನು ಸಮರ್ಪಿಸಿದರು. ಮುಖ್ಯಮಂತ್ರಿಗಳ ಗ್ಯಾರಂಟಿ ಯೋಜನೆಯನ್ನು ಶ್ಲಾಘಿಸಿದರು.

ಹೊಸದಾಗಿ ನೇಮಕಾತಿ ಹೊಂದಿದ ಸಹಾಯಕ ಪ್ರಾಧ್ಯಾಪಕ ಶ್ರೀಮತಿ ನಾಗಲಕ್ಷ್ಮಿ ಜಿ. ಮಾತನಾಡಿ    ಸಹಾಯಕ ಪ್ರಾಧ್ಯಾಪಕ ಹುದ್ದೆಯ ನೇಮಕಾತಿ ಆದೇಶ ಪತ್ರವು ಸಿಗಬೇಕಾದರೆ ಸಮಸ್ಯೆ ಸವಾಲುಗಳನ್ನು ಎದುರಿಸಬೇಕಾಯಿತು. ನಮ್ಮ ಜೊತೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು ನ್ಯಾಯಾಲಯದ ತಡಯಾಜ್ಞೆಯನ್ನು ಶೀಘ್ರವಾಗಿ ಬಗೆಹರಿಸಿ, ಶೀಘ್ರವಾಗಿ ಪರಿಶೀಲನಾ ಕಾರ್ಯವನ್ನು ಮುಗಿಸಿ ನಮಗೆ ನೇವiಕಾತಿ ಪತ್ರವನ್ನು ನೀಡಿರುವುದು ಅಭಿನಂದನೀಯ ಎಂದು ತಿಳಿಸಿ, ಸರ್ಕಾರಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದರು.

ಕಾರ್ಯಕ್ರಮದಲ್ಲಿ  ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರಾದ  ಕುಮಾರಿ ಮಂಜುಶ್ರೀ ಎನ್. ಅವರು ಸ್ವಾಗತ ಭಾಷಣ ಮಾಡಿದರು.

ಕಾಲೇಜು ಶಿಕ್ಷಣ ಇಲಾಖೆಯ ಮುಖ್ಯ ಆಡಳಿತಾಧಿಕಾರಿ ಶ್ರೀಮತಿ ಶೋಭಾ ಅವರು ವಂದನಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಇಲಾಖೆಯ  ಪ್ರಧಾನ ಕಾರ್ಯದರ್ಶಿ ಶ್ರೀಕರ್, ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕ ಪ್ರೊ. ಶೋಭಾ .ಜಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Publisher: ಕನ್ನಡ ನಾಡು | Kannada Naadu

Login to Give your comment
Powered by